ಬೀದರ್: ಕ್ರೈಸ್ತರ ಪ್ರಮುಖ ಹಬ್ಬವಾದ ಕ್ರಿಸ್ಮಸ್ ನಿಮಿತ್ತ ನಗರದಲ್ಲಿ ಭಾನುವಾರ ನಗರದಲ್ಲಿ ‘ಮ್ಯಾರಥಾನ್ ಓಟ’ ನಡೆಯಿತು. ಮಂಗಲಪೇಟ್ನ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಆಯೋಜಿಸಿದ್ದ ಮ್ಯಾರಥಾನ್ ಓಟದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಂಗಲಪೇಟ್ನಲ್ಲಿ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ಎ. ನಿಮಿಯೋನ್ ಓಟಕ್ಕೆ ಚಾಲನೆ ನೀಡಿದರು. ಚೌಬಾರ, ಮಹಮ್ಮದ್ ಗವಾನ್ ವೃತ್ತ, ಶಾಹಗಂಜ್, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಪೊಲೀಸ್ ವೃತ್ತದ ಮತ್ತೆ ಓಟ ಮಂಗಲ್ ಪೇಟ್ ತಲುಪಿತು.
ಮ್ಯಾರಥಾನ್ನಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಕರು, ಹಿರಿಯರು ಉತ್ಸಾಹದಿಂದ ಪಾಲ್ಗೊಂಡರು.
ನಂತರ ನಡೆದ ಸಮಾರಂಭದಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಾಗೂ ಹಿರಿಯ ನಾಗರಿಕರ ವಿಭಾಗಗಳಲ್ಲಿನ ವಿಜೇತರಿಗೆ ಬಹುಮಾನ ನೀಡಲಾಯಿತು.
ನಗರಸಭೆ ಸದಸ್ಯ ಫಿಲೋಮಿನ್ರಾಜ್ ಪ್ರಸಾದ್, ಎನ್.ಎಫ್. ಶಾಲೆಯ ಮುಖ್ಯಗುರು ಬಿ.ಕೆ. ಸುಂದರರಾಜ್, ಸುದರ್ಶನ್ ಸುಂದರರಾಜ್, ಸಂಜಯ್, ನೋವೆಲ್ ಆಶಿಸ್, ರಾರ್ಬಟ್ ಡೇವಿಡ್, ಪ್ರವೀಣಕುಮಾರ್ ವಸಂತರಾಜ್ ಪಾಲ್ಗೊಂಡಿದ್ದರು. ಸಾಯಂಕಾಲ ಎನ್.ಎಫ್. ಪ್ರೌಢಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.