ಅಂತರ್ರಾಷ್ಟ್ರೀಯ ಮಕ್ಕಳ ಕ್ರೀಡಾಕೂಟದಲ್ಲಿ (ಮಕ್ಕಳ ಒಲಿಂಪಿಕ್ಸ್) ಪಾಲ್ಗೊಳ್ಳುವ ಬೆಂಗಳೂರು ಸ್ಕೂಲ್ಸ್ ಸ್ಪೋರ್ಟ್ಸ್ ಫೌಂಡೇಶನ್ನ (ಬಿಎಸ್ಎಸ್ಎಫ್) ತಂಡದ ಪ್ರಾಯೋಜಕತ್ವ ವಹಿಸಲು ಯುಬಿ ಸಮೂಹದ ಮುಖ್ಯಸ್ಥ ವಿಜಯ್ ಮಲ್ಯ ಮುಂದಾಗಿದ್ದಾರೆ.
ಈ ಶಾಲಾ ತಂಡ ಕೂಟದಲ್ಲಿ ಕಳೆದ ಮೂರು ವರ್ಷದಿಂದಲೂ ಪಾಲ್ಗೊಳ್ಳುತ್ತಿವೆ. ಆದರೆ ಪ್ರಾಯೋಜಕರ ಕೊರತೆ ಅದರ ಉತ್ಸಾಹಕ್ಕೆ ತಣ್ಣೀರೆರಚುತ್ತಲೇ ಬಂದಿದೆ. ಬಹುತೇಕ ಸಂದರ್ಭಗಳಲ್ಲಿ ಮಕ್ಕಳ ಪೋಷಕರೇ ಲಕ್ಷಾಂತರ ರೂಪಾಯಿ ವೆಚ್ಚ ಭರಿಸುತ್ತಿದ್ದರು. ಈ ಸಲವೂ 7 ಮಕ್ಕಳ ತಂಡಕ್ಕೆ ಹಣದ ಕೊರತೆ ಎದುರಾಗಿತ್ತು. ಇದನ್ನು `ಪ್ರಜಾವಾಣಿ~ ಕ್ರೀಡಾ ಪುರವಣಿ ಬೆಳಕಿಗೆ ತಂದಿತ್ತು. ಈಗ ಮಲ್ಯ ಅವರು ಇದಕ್ಕೆ ಸಹಾಯಹಸ್ತ ನೀಡಿದ್ದಾರೆ.
ಮಕ್ಕಳ ಕ್ರೀಡಾಕೂಟಕ್ಕೆ ಅಂತರ್ರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಓಸಿ) ಮಾನ್ಯತೆಯಿದೆ. 50 ದೇಶಗಳ ಸುಮಾರು 3000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಬೆಂಗಳೂರು ತಂಡದಲ್ಲಿ ಹೆಬ್ಬಾಳ ವಿದ್ಯಾನಿಕೇತನ ಶಾಲೆಯ ಆದಿತ್ಯ ಶರ್ಮಾ, ಹೇಮಂತ್ ಮತ್ತು ತೇಜಸ್, ಮಲ್ಯ ಅದಿತಿ ಶಾಲೆಯ ಶಿವ್, ಎಬನೇಜರ್ ಶಾಲೆಯ ಸಿದ್ದಾರ್ಥ, ನ್ಯಾಷನಲ್ ಹಿಲ್ವ್ಯೆ ಶಾಲೆಯ ಚಿರಾಗ್, ಗ್ರೀನ್ವುಡ್ ಶಾಲೆಯ ರಿಷಬ್ ಇದ್ದಾರೆ.
ಕ್ರೀಡಾಪ್ರೇಮಿಯಾದ ಮಲ್ಯ ಅವರ ಯುಬಿ ಸಮೂಹ ಕ್ರಿಕೆಟ್, ಫುಟ್ಬಾಲ್, ಗಾಲ್ಫ್, ಫಾರ್ಮುಲಾ ಒನ್, ಕುದುರೆ ಸವಾರಿ ಮುಂತಾದ ಕ್ರೀಡಾವಳಿಗಳನ್ನು ಪ್ರಾಯೋಜಿಸುತ್ತ ಬಂದಿದೆ. ಕ್ರೀಡಾ ಪ್ರತಿಭೆಗಳ ಶೋಧನೆಗೂ ವೇದಿಕೆ ಒದಗಿಸಿದೆ. ದೇಶದ ಪ್ರಸಿದ್ಧ ಫುಟ್ಬಾಲ್ ತಂಡಗಳಾದ ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್ಗೂ ಬೆಂಬಲಿಸುತ್ತಿದೆ.
ಇತ್ತೀಚೆಗೆ ಫೋರ್ಸ್ ಇಂಡಿಯಾ ಎಫ್1 ಟೀಮ್ ಅಕಾಡೆಮಿ ಸ್ಥಾಪಿಸುವ ಮೂಲಕ ಮೂಲಕ ವೃತ್ತಿಪರ ಮೋಟಾರ್ ಸ್ಪೋರ್ಟ್ಸ್ಗಳಲ್ಲಿ ಭಾಗವಹಿಸುವ ಭಾರತೀಯ ಮಕ್ಕಳು ಮತ್ತು ಯುವಜನರಿಗೆ ತರಬೇತಿ ನೀಡುತ್ತಿದೆ.