ಯಲಹಂಕ: `ಕ್ರೀಡಾಪಟುಗಳು ದೈಹಿಕ ಶಿಕ್ಷಕರಾಗಿ ಬಡ್ತಿ ಹೊಂದಿದ ನಂತರ ಕೇವಲ ಸಂಬಳಕ್ಕಾಗಿ ಕಾರ್ಯನಿರ್ವಹಿಸದೆ ದಿನಕ್ಕೆ ಕನಿಷ್ಠ ಒಂದು ಗಂಟೆಯಾದರೂ ಮಕ್ಕಳಿಗೆ ಆಟದ ಬಗ್ಗೆ ತರಬೇತಿ ನೀಡುವ ಮೂಲಕ ಅವರನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸಬೇಕು~ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ಕೊಕೋ ಹಾಗೂ ಕಬಡ್ಡಿ ತರಬೇತುದಾರ ಎಸ್. ಪ್ರಕಾಶ್ ಸಲಹೆ ನೀಡಿದರು.
ಕ್ರೀಡಾ ರತ್ನ ಯೂತ್ ಅಸೋಸಿಯೇಷನ್ ವತಿಯಿಂದ ಭಾನುವಾರ ಹೆಬ್ಬಾಳದ ಚೋಳ ನಾಯಕನಹಳ್ಳಿಯ ಸುಮಂಗಲಿ ಸೇವಾಶ್ರಮದಲ್ಲಿ ಆಯೋಜಿಸಿದ್ದ 2010-11ನೇ ಸಾಲಿನ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸುಮಂಗಲಿ ಸೇವಾಶ್ರಮದ ಸಂಸ್ಥಾಪಕಿ ಎಸ್.ಜಿ. ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪ್ಪಾರಪೇಟೆ ಠಾಣೆ ಇನ್ಸ್ಪೆಕ್ಟರ್ ಲೋಕೇಶ್ವರ, ಸಮಾಜ ಸೇವಕರಾದ ವಿ.ಶಾಮಣ್ಣ, ಪದ್ಮನಾಭ, ಬೆಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಪ್ರಾಂಶುಪಾಲ ಪ್ರೊ.ಡಾ.ಆರ್.ಶ್ರೀನಿವಾಸ್, ಸಂಘದ ಉಪಾಧ್ಯಕ್ಷ ಎ.ವಿ.ದೇವರಾಜು ಮೊದಲಾದವರು ಉಪಸ್ಥಿತರಿದ್ದರು.