ಬಾಗೇಪಲ್ಲಿ: ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿಯೇ ಕ್ರೀಡಾ ಹವ್ಯಾಸ ರೂಢಿ ಸಿಕೊಳ್ಳುವುದರ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ನ್ಯಾಷನಲ್ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಎನ್.ನಂಜುಂಡಪ್ಪ ತಿಳಿಸಿದರು.
ಪಟ್ಟಣದ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಬುಧವಾರ ‘ಬೆಂಗಳೂರು ವಿಶ್ವವಿದ್ಯಾಲಯ ಅಂತರಕಾಲೇಜು ದಕ್ಷಿಣ ವಲಯ ಪುರುಷರ ವಾಲಿಬಾಲ್ ಟೂರ್ನಿ’ಗೆ ಚಾಲನೆ ನೀಡಿ ಮಾತನಾಡಿದರು.
‘ಪ್ರತಿದಿನ ಧ್ಯಾನ, ಪ್ರಾಣಾಯಾಮ, ಕ್ರೀಡೆಗಳ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗಳಿಗೆ ವಿಶೇಷ ಪ್ರಾಧ್ಯಾನತೆ ನೀಡಬೇಕು. ಕ್ರೀಡೆಗಳಲ್ಲಿ ಸೋಲು-ಗೆಲುವು ಇರುತ್ತದೆ. ಸತತ ಅಭ್ಯಾಸಗಳಿಂದ ಕ್ರೀಡೆಗಳಲ್ಲಿ ಜಯಶಾಲಿಯಾಗಬಹುದು’ ಎಂದರು.
ಸಬ್ಇನ್ಸ್ಪೆಕ್ಟರ್ ಜೆ.ಎನ್.ಆನಂದ್ಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳು ಸೇವಾ ಮನೋಭಾವನೆ ಬೆಳಿಸಿಕೊಳ್ಳಬೇಕು. ತಾಲ್ಲೂಕಿನಲ್ಲಿ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಪಟ್ಟಣ ಪ್ರದೇಶಕ್ಕೆ ಆಗಮಿಸಿ ವಿದ್ಯಾ ಭ್ಯಾಸ ಮಾಡುತ್ತಿದ್ದಾರೆ. ವಿದ್ಯಾ ಭ್ಯಾಸದ ಕಡೆ ಗಮನ ಹರಿಸುವುದರ ಜೊತೆಗೆ ತಂದೆ- ತಾಯಿಯ ಸೇವೆ ಮಾಡಬೇಕು’ ಎಂದು ಹೇಳಿದರು.
ನ್ಯಾಷನಲ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ಪಿ.ವೆಂಕಟರಾಮ, ವಾಲಿಬಾಲ್ ಕ್ರೀಡಾಪಟುಗಳಾದ ಎಸ್.ಸರ್ದಾರ್, ಬಿ.ಜಿ.ಶ್ರೀನಿವಾಸ್, ಉಪನ್ಯಾಸಕರಾದ ಪ್ರೊ.ಡಿ.ಶಿವಣ್ಣ, ಕೆ.ಟಿ.ವೀರಾಂಜನೇಯಲು, ಎ.ಕೆ.ನಿಂಗಪ್ಪ, ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟು ಬಿ.ಎಸ್.ನಾಗಭೂಷಣ್, ದೈಹಿಕ ಶಿಕ್ಷಣ ನಿರ್ದೇಶಕ ಸಿ.ಆರ್.ಪ್ರಕಾಶ್ ಇತರರು ಉಪಸ್ಥಿತರಿದ್ದರು.