ಹಿರಿಯೂರು: ನಗರದ ಹುಳಿಯಾರು ರಸ್ತೆಯಲ್ಲಿ ಹೆಸರಿಗೆ ತಾಲ್ಲೂಕು ಕ್ರೀಡಾಂಗಣವಿದ್ದು, ಅವ್ಯವಸೆಯ ಆಗರವಾಗಿದೆ. ಕ್ರೀಡಾಪಟುಗಳು, ವಾಯುವಿಹಾರಿಗಳು ಇದನ್ನು ಕ್ರೀಡಾಂಗಣ ಎನ್ನುವ ಬದಲು ಜಾನುವಾರುಗಳು ಮೇಯುವ ತಾಣ ಎಂಬ ಅಡ್ಡ ಹೆಸರಿನಿಂದ ಕರೆಯುವುದು ವಾಡಿಕೆಯಾಗಿದೆ.
1996-97 ರಲ್ಲಿ ಡಿ. ಮಂಜುನಾಥ್ ಸಚಿವರಾದ ಸಮಯದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ರೂ 37 ಲಕ್ಷ ರೂಪಾಯಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಭೂಸೇನಾ ನಿಗಮಕ್ಕೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಲಾಗಿತ್ತು. ಸುಮಾರು ಹತ್ತು ವರ್ಷ ಕುಂಟುತ್ತಾ ಸಾಗಿದ ಕಾಮಗಾರಿ ಮೂರು ವರ್ಷದ ಹಿಂದೆ ಮುಗಿಸಿದರೂ ಕ್ರೀಡಾಂಗಣದಲ್ಲಿ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು ಎನ್ನುವುದು ಕ್ರೀಡಾಪಟುಗಳ ಆರೋಪ.
ಕ್ರೀಡಾಂಗಣದ ತುಂಬಾ ಹುಲ್ಲು ಬೆಳೆದಿದೆ. ಈಚೆಗೆ ತಾಲ್ಲೂಕುಮಟ್ಟದ ಪ್ರೌಢಶಾಲೆ ಹಾಗೂ ಪಿಯು ಕಾಲೇಜು ಕ್ರೀಡಾಕೂಟ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಜನಪ್ರತಿನಿಧಿಗಳು ಕ್ರೀಡಾಂಗಣದ ನಿರ್ವಹಣೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ವಿವಿಧ ಪಂದ್ಯಗಳಿಗೆ ಬೇಕಿರುವ ಆಟದ ಮೈದಾನವನ್ನು ಕ್ರೀಡಾಕೂಟ ನಡೆಸುವವರೇ ಸಿದ್ಧಪಡಿಸಿಕೊಳ್ಳಬೇಕು. ಕುಡಿಯುವ ನೀರನ್ನು ಪುರಸಭೆ ಪೂರೈಸಬೇಕು. ಬಿಸಿಲಿದ್ದರಂತೂ ಕ್ರೀಡಾಪಟುಗಳಿಗೆ ಶಾಮಿಯಾನದ ನೆರಳು ಬಿಟ್ಟರೆ ಬೇರೆ ಗತಿಯಿಲ್ಲ. ಮಳೆ ಬಂದರಂತೂ ನೀರು ಸರಾಗವಾಗಿ ಮೈದಾನದ ಹೊರಗೆ ಹೋಗುವುದಿಲ್ಲ. ಇದನ್ನು ತಾಲ್ಲೂಕುಮಟ್ಟದ ಕ್ರೀಡಾಂಗಣ ಎಂದು ಕರೆಯಲು ಬೇಸರವಾಗುತ್ತದೆ ಎಂದು ಹಿರಿಯ ಕಬಡ್ಡಿ ಕ್ರೀಡಾಪಟು ಶ್ರೀನಿವಾಸನಾಯಕ ಹೇಳುತ್ತಾರೆ.
ಕಾಯಕಲ್ಪ ಅಗತ್ಯ: ಕ್ರೀಡಾಂಗಣದ ಸುತ್ತ ಸಸಿ ನೆಡುವ ಕಾರ್ಯ ಆಗಬೇಕು. ವಾಯುವಿಹಾರಕ್ಕೆ ಬರುವವರಿಗೆ ಮರಗಳ ಕೆಳಗೆ ಕಲ್ಲು ಬೆಂಚು ಹಾಕಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕ್ರೀಡೆಗಳಿಗೆ ಬೇಕಿರುವ ಟ್ರ್ಯಾಕ್ ನಿರ್ಮಿಸಬೇಕು. ಕ್ರೀಡಾಂಗಣದಲ್ಲಿ ಬೀಳುವ ಮಳೆಯ ನೀರು ಸರಾಗವಾಗಿ ಹರಿದು ಹೊರಹೋಗುವಂತೆ ಮಾಡಬೇಕು. ಪಾರ್ಥೇನಿಯಂ ಕಳೆ ಬೆಳೆಯದಂತೆ ನಿರ್ವಹಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.