ದಾವಣಗೆರೆ: ಕ್ರೀಡಾ ಕ್ಷೇತ್ರದಿಂದ ಬರುವ ಯುವಕರು ಕೈಗಾರಿಕೆ ಸ್ಥಾಪಿಸುವುದಿದ್ದರೆ ಅವರಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂದು ಸಣ್ಣ ಕೈಗಾರಿಕೆ ಸಚಿವ ರಾಜುಗೌಡ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ 29ನೇ ರಾಜ್ಯಮಟ್ಟದ ಕಿರಿಯರ ಮತ್ತು ಹಿರಿಯರ ಅಥ್ಲೆಟಿಕ್ ಚಾಂಪಿಯನ್ಷಿಪ್ -2012ರ ಉದ್ಘಾಟನಾ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಶುಕ್ರವಾರ ಅವರು ಮಾತನಾಡಿದರು.
ದೇಶದಲ್ಲಿ 120 ಕೋಟಿಗೂ ಮಿಕ್ಕಿ ಜನಸಂಖ್ಯೆ ಇದ್ದರೂ ಒಲಿಂಪಿಕ್ಸ್ನಲ್ಲಿ ಒಂದು ಚಿನ್ನದ ಪದಕ ತರಲು ಶ್ರಮ ಪಡಬೇಕಿದೆ. ಗುರಿ ತಲುಪುವ ಛಲ ಕ್ರೀಡಾಪಟುವಿಗೆ ಮುಖ್ಯ ಎಂದರು.
ಕೂಟ ಉದ್ಘಾಟಿಸಿದ ಯುವಜನ ಮತ್ತು ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತವಿರುವ ಕ್ರೀಡೆಗಳ ಅಕಾಡೆಮಿಯನ್ನು ಆಯಾ ಜಿಲ್ಲೆಯಲ್ಲಿ ಸ್ಥಾಪಿಸಲಾಗುವುದು. ಕೊಡಗಿನಲ್ಲಿ ಹಾಕಿ ಅಕಾಡೆಮಿ ಸ್ಥಾಪಿಸಲಾಗುವುದು ಎಂದರು.
ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಜಿಲ್ಲಾ ಕ್ರೀಡಾಂಗಣದ ಕಟ್ಟಡ ಅಭಿವೃದ್ಧಿ ಹಾಗೂ ಪ್ರೇಕ್ಷಕರ ಗ್ಯಾಲರಿ ನಿರ್ಮಾಣಕ್ಕೆ ತಲಾ ರೂ 50 ಲಕ್ಷ ಅನುದಾನ ಹಾಗೂ ಸಿಂಥೆಟಿಕ್ ಟ್ರ್ಯಾಕ್ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು.
ಶಾಸಕರಾದ ಎಸ್.ವಿ. ರಾಮಚಂದ್ರ, ಬಿ.ಪಿ. ಹರೀಶ್, ಡಾ.ಎ.ಎಚ್. ಶಿವಯೋಗಿಸ್ವಾಮಿ, ಸುರೇಶ್ ಜೈನ್ ಇದ್ದರು. ಮಾಜಿ ಶಾಸಕ ಕೆ. ಮಲ್ಲಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯೆ ಜಯಲಕ್ಷ್ಮೀ, ಡಾ.ಬಿ. ಸುಬೋಧ ಶೆಟ್ಟಿ ಎಚ್.ಆರ್. ಹುಚ್ಚಂಗೆಪ್ಪ, ಸಿ. ಸಣ್ಣರೆಡ್ಡಿ ನಾಯ್ಕ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್ ಇದ್ದರು. ಅಂಬಾಸಾ ಮೆಹರ್ವಾಡೆ ಸ್ವಾಗತಿಸಿದರು.