ನವದೆಹಲಿ: ಕಾಲೇಜು ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಹೆಚ್ಚಿಸಲು ಕ್ರಿಕೆಟಿಗ ಮತ್ತು ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಗಂಭೀರವಾಗಿ ಚಿಂತನೆ ನಡೆಸಿದ್ದು, ಸರ್ಕಾರದ ಜತೆ ತಮ್ಮ ಯೋಜನೆಯ ಬಗ್ಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ.
ಮಾನವ ಸಂಪನ್ಮೂಲ ಖಾತೆಯ ಸಚಿವ ಕಪಿಲ್ ಸಿಬಲ್ ಜತೆ ತಮ್ಮ ಯೋಜನೆಯ ಬಗ್ಗೆ ಚರ್ಚಿಸಲು ನಿರ್ಧರಿಸಿರುವ ಸಚಿನ್, ಸಚಿವರಿಗೆ ಈ ಕುರಿತು ಪತ್ರ ಬರೆದಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡೆಗಳನ್ನು ಯಾವ ರೀತಿ ಪ್ರೋತ್ಸಾಹಿಸಬಹುದು ಎಂಬುದರ ಬಗ್ಗೆ ಪತ್ರದಲ್ಲಿ ವಿವರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ ಪತ್ರದಲ್ಲಿ ಏನು ಸಲಹೆ ನೀಡಲಾಗಿದೆ ಎಂಬ ಬಗ್ಗೆ ತಿಳಿದು ಬಂದಿಲ್ಲ.
ಸಚಿವರು ತೆಂಡೂಲ್ಕರ್ ಜತೆ ಚರ್ಚಿಸಲು ಉತ್ಸುಕರಾಗಿದ್ದು, ಶೀಘ್ರದಲ್ಲಿಯೇ ಇಬ್ಬರು ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ.
ಸಚಿನ್ ಅವರು ಜೂನ್ 4ರಂದು ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.