ಹೊನ್ನೇಕೊಡಿಗೆ (ನರಸಿಂಹರಾಜಪುರ): `ದೇಸಿ ಕ್ರೀಡೆಗಳು ಗ್ರಾಮೀಣ ಸಂಸ್ಕೃತಿಯ ಅವಿಭಾಜ್ಯ ಅಂಗ~ ಎಂದು ಕೃಷಿಕ ಬಿ.ಆರ್.ಜುಂಜಪ್ಪಗೌಡ ಹೇಳಿದರು.
ತಾಲ್ಲೂಕಿನ ಹೊನ್ನೇಕೊಡಿಗೆ ಗ್ರಾಮದಲ್ಲಿ ಟೈಗರ್ ಹಿಲ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಕಬ್ಬಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮ ಮಟ್ಟದಲ್ಲಿ ಇಂತಹ ಕ್ರೀಡೆ ಆಯೋಜಿಸಿರುವುದು ಗ್ರಾಮಸ್ಥರಿಗೆ ಸಂತಸ ತಂದಿದೆ ಎಂದರು.
ಗ್ರಾಮದ ಕೆ.ಟಿ.ಶೇಷಣ್ಣಗೌಡ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾ ಸ್ಫೂರ್ತಿಯಿಂದ ಆಟವಾಡಬೇಕು. ಗ್ರಾಮೀಣ ಕ್ರೀಡೆ ಬೆಳೆಯಲು ಈ ರೀತಿಯ ಕ್ರೀಡಾಕೂಟಗಳು ನೆರವಾಗುತ್ತವೆ ಎಂದರು.
ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ.ಸುಂದರೇಶ್ ಮಾತನಾಡಿ, ಗ್ರಾಮ ಮಟ್ಟದಲ್ಲಿ ಜಿಲ್ಲಾ ಮಟ್ಟದ ಕಬ್ಬಡಿ ಕ್ರೀಡೆ ನಡೆಸುತ್ತಿರುವ ಕ್ರೀಡಾ ಕ್ಲಬ್ನ ಕಾರ್ಯದಿಂದ ಗ್ರಾಮೀಣ ಕ್ರೀಡೆಗಳು ಉಳಿಯಲು ಸಹಕಾರಿಯಾಗುತ್ತವೆ ಎಂದರು.
ಟೈಗರ್ಹಿಲ್ಸ್ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಬಿ.ಎನ್.ರಾಘವೇಂದ್ರ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ನಡೆಸಲು ಎಲ್ಲರೂ ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದರು.
ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಮ್ಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯೆ ನಾಗವೇಣಿ, ಟೈಗರ್ ಹಿಲ್ಸ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಕೌಶಿಕ್, ಶಿಕ್ಷಕರಾದ ಎಂ.ಪ್ರಕಾಶ್, ಪ್ರಭು ನಾಯಕ್, ಹನುಮಂತಪ್ಪ, ಎಚ್.ಎಸ್.ಸಿಂಪನಾ, ಎಸ್.ಜಿ.ಕೌಶಿಕ್, ಪ್ರದೀಪ್, ಎಚ್.ರಾಜಪ್ಪ ಇದ್ದರು.