ಕ್ವಾರ್ಟರ್ ಫೈನಲ್ಗೆ ನಿಕ್ಷೇಪ್
ಹೈದರಾಬಾದ್: ಕರ್ನಾಟಕದ ಬಿ.ಆರ್. ನಿಕ್ಷೇಪ್ ಗೆಲುವಿನ ಓಟ ಮುಂದುವರಿದಿದೆ. ಇಲ್ಲಿ ನಡೆಯುತು್ತಿರುವ ಐಟಿಎಫ್ ಜೂನಿಯರ್ ಟೆನಿಸ್ ಟೂರ್ನಿಯ ಸಿಂಗಲ್ಸ್ನಲ್ಲಿ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪ್ರೀ ಕ್ವಾರ್ಟರ್ಫೈನಲ್ ಸೆಣಸಾಟದಲ್ಲಿ ನಿಕ್ಷೇಪ್ 6–2, 6–4ರಲ್ಲಿ ಐದನೇ ಶ್ರೇಯಾಂಕ ಹೊಂದಿರುವ ಚೈನೀಸ್ ತೈಪೆಯ ಹಾನ್ ಯೂ ಚೇನ್ ಎದುರು ಜಯ ಪಡೆದರು.
9 ರಿಂದ ಟೆನಿಸ್ ಟೂರ್ನಿ
ಬೆಂಗಳೂರು: ಕರ್ನಾಟಕ ಲಾನ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಸೆಪ್ಟೆಂಬರ್ 9ರಿಂದ 14ರ ವರೆಗೆ ಎಐಟಿಎ ಟೆನಿಸ್ ಟೂರ್ನಿ ಇಲ್ಲಿನ ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ನಡೆಯಲಿದೆ.
ಈ ಟೂರ್ನಿ ಒಟ್ಟು ರೂ 3.5 ಲಕ್ಷ ಬಹುಮಾನ ಮೊತ್ತ ಒಳಗೊಂಡಿದೆ. 300ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅರ್ಹತಾ ಸುತ್ತಿನಲ್ಲಿ ಜಯ ಗಳಿಸಿದ ಎಂಟು ಸ್ಪರ್ಧಿಗಳು ಮತ್ತು ನಾಲ್ವರು ‘ವೈಲ್ಡ್ ಕಾರ್ಡ್’ ಪ್ರವೇಶ ಪಡೆದವರು ಪಾಲ್ಗೊಳ್ಳಲಿದ್ದಾರೆ. 7 ಮತ್ತು 8ರಂದು ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.
‘ಪುರುಷರ ವಿಭಾಗಕ್ಕೆ ರೂ 27,300 ಮತ್ತು ಮಹಿಳಾ ವಿಭಾಗಕ್ಕೆ ರೂ 18,200 ಬಹುಮಾನ ನಿಗದಿ ಮಾಡಲಾಗಿದೆ. ಕಳೆದ ವರ್ಷದ ರನ್ನರ್ ಅಪ್ ಕೆ. ನಿತಿನ್ ಪುರುಷರ ವಿಭಾಗದಲ್ಲಿ ಇಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಸ್ಥಳೀಯ ಆಟಗಾರ್ತಿ ಶರ್ಮದಾ ಬಾಲು ಅಗ್ರ ಶ್ರೇಯಾಂಕ ಹೊಂದಿದ್ದಾರೆ’ ಎಂದು ಟೂರ್ನಿಯ ನಿರ್ದೇಶಕ ನಿರಂಜನ್ ರಮೇಶ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಪ್ರಮುಖ ಸ್ಪರ್ಧಿಗಳಾದ ಮೋಹಿತ್ ಮಯೂರ್, ಪಿ.ಸಿ. ವಿಘ್ನೇಶ್, ಅಶ್ವಿನ್ ವಿಜಯ್ ರಾಘವನ್, ಶರ್ಮದಾ ಬಾಲು, ನೂಪುರ್ ಕೌಲ್ ಪೈಪೋಟಿ ನಡೆಸಲಿದ್ದಾರೆ.
ಕ್ರಿಕೆಟ್: ಕರ್ನಾಟಕಕ್ಕೆ ಗೆಲುವು
ಹೈದರಾಬಾದ್: ಮಯಂಕ್ ಅಗರ್ವಾಲ್ (98, 70ಎಸೆತ, 10 ಬೌಂಡರಿ, 3 ಸಿಕ್ಸರ್) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ಬುಧವಾರ ಇಲ್ಲಿ ನಡೆದ ಮೊಯಿನ್ ಉದ್ ದೌಲಾ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಹೈದರಾಬಾದ್ ಅಧ್ಯಕ್ಷರ ಇಲೆವೆನ್ ಎದುರು ಗೆಲುವು ಸಾಧಿಸಿತು.
ಸಂಕ್ಷಿಪ್ತ ಸ್ಕೋರು: ಹೈದರಾಬಾದ್ ಅಧ್ಯಕ್ಷರ ಇಲೆವೆನ್: 339 ಮತ್ತು ಎರಡನೇ ಇನಿಂಗ್ಸ್ 40 ಓವರ್ಗಳಲ್ಲಿ 7 ವಿಕೆಟ್ಗೆ 224. (ಅಹ್ಮದ್ ಖಾದ್ರಿ 79, ಅಭಿನವ್ ಕುಮಾರ್ 41, ಸುದೀಪ್ ರಾಜನ್ 32; ಎಸ್.ಅರವಿಂದ್ 73ಕ್ಕೆ3, ಎಸ್.ಎಲ್. ಅಕ್ಷಯ್ 40ಕ್ಕೆ2). ಕರ್ನಾಟಕ: 343 ಮತ್ತು ದ್ವಿತೀಯ ಇನಿಂಗ್ಸ್ 38.2 ಓವರ್ಗಳಲ್ಲಿ 4 ವಿಕೆಟ್ಗೆ 224. (ಮಯಂಕ್ ಅಗರ್ವಾಲ್ 98, ಕರುಣ್ ನಾಯರ್ 81, ಅರ್ಜುನ ಹೊಯ್ಸಳ ಔಟಾಗದೆ 24).
ಎಂಎಸ್ಆರ್ಐಟಿಗೆ ಜಯ
ಬೆಂಗಳೂರು: ಕೆ. ಪ್ರತೀಕ್ (69) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಎಂಎಸ್ಆರ್ಐಟಿ ತಂಡ ಇಲ್ಲಿ ನಡೆಯುತ್ತಿರುವ 16ನೇ ಡಾ. ಎಂ.ಎಸ್. ರಾಮಯ್ಯ ಸ್ಮಾರಕ ಅಂತರ ಎಂಜಿನಿಯರಿಂಗ್ ಕಾಲೇಜುಗಳ ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಆರ್ವಿಇಸಿ ಎದುರು ಎಂಟು ವಿಕೆಟ್ಗಳ ಗೆಲುವು ಸಾಧಿಸಿತು.
ಸಂಕ್ಷಿಪ್ತ ಸ್ಕೋರು: ಆರ್ವಿಇಸಿ 30 ಓವರ್ಗಳಲ್ಲಿ 7 ವಿಕೆಟ್ಗೆ 131. (ಅಗ್ನೀವ್ ಘೋಷ್ 42; ರಿತ್ವಿಕ್ 18ಕ್ಕೆ3). ಎಂಎಸ್ಆರ್ಐಟಿ 24 ಓವರ್ಗಳಲ್ಲಿ 2 ವಿಕೆಟ್ಗೆ 132. (ಕೆ. ಪ್ರತೀಕ್ 69).
ಬ್ಯಾಸ್ಕೆಟ್ಬಾಲ್: ಕರ್ನಾಟಕಕ್ಕೆ ನಿರಾಸೆ
ಕಟಕ್: ಕರ್ನಾಟಕ ಬಾಲಕರ ತಂಡದವರು ಇಲ್ಲಿ ನಡೆಯುತು್ತಿರುವ 64ನೇ ರಾಷ್ಟ್ರೀಯ ಜೂನಿಯರ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಬುಧವಾರದ ಪಂದ್ಯದಲ್ಲಿ 81–92 ಪಾಯಿಂಟ್ಗಳಿಂದ ತಮಿಳುನಾಡು ಎದುರು ನಿರಾಸೆ ಕಂಡಿತು.
ಕರ್ನಾಟಕದ ಕ್ಲಿಂಟನ್ (21 ಪಾಯಿಂಟ್), ಜಿತೇಂದರ್ (15), ಎಂ. ಶರತ್ (10) ಪಾಯಿಂಟ್ ಕಲೆ ಹಾಕಿ ಗಮನ ಸೆಳೆದರು. ಬಾಲಕರ ವಿಭಾಗದಲ್ಲಿ ಹರಿಯಾಣ, 89–68ರಲ್ಲಿ ಉತ್ತರ ಪ್ರದೇಶ ಮೇಲೆ ಜಯ ಸಾಧಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.