ದಾವಣಗೆರೆ: ಕ್ರೀಡೆ, ಶಿಕ್ಷಣ, ಜೀವನ ಯಾವುದೇ ಆಗಲಿ ಯಶಸ್ಸುಗಳಿಸಲು ನಿರ್ದಿಷ್ಟ ಗುರಿ ಇ್ದ್ದದರಷ್ಟೇ ಸಾಧ್ಯ. ಗುರಿ ಇಲ್ಲದ ಜೀವನ ಅಂಧ ಬದುಕಿಗೆ ನಾಂದಿಯಾಗುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ್ ಅಭಿಪ್ರಾಯಪಟ್ಟರು.
ಸಮೀಪದ ತೊಳಹುಣಸೆಯಲ್ಲಿ ಸೋಮವಾರ ಪಾರ್ವತಮ್ಮ , ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿಶಾಲೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 7ನೇ ಅಂತರರಾಜ್ಯ ಮಟ್ಟದ ಸಿಬಿಎಸ್ಇ ಗೊಂಚಲು ಫುಟ್ಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕ್ರೀಡಾಪಟುಗಳಲ್ಲಿ ಸೇಡಿನ ಮನೋಭಾವ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಕ್ರೀಡೆಯಲ್ಲಿ ಸಾಮರಸ್ಯ ಬೆರೆತಾಗ ಮಾತ್ರ ಉತ್ತಮ ಕ್ರೀಡಾಪಟುಗಳು ಹೊರಬರಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಒಂದು ಕಾಲದಲ್ಲಿ ದಾವಣಗೆರೆಯಲ್ಲಿ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಗಳು ನಡೆಯುತ್ತಿದ್ದವು. ಈಗ ಶಾಲಾ ಆವರಣಗಳಲ್ಲಿ ಅದರ ಪುನರುತ್ಥಾನವಾಗಿದೆ. ಫುಟ್ಬಾಲ್ ಕ್ರೀಡೆ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಎಲ್ಲಾ ಶಾಲೆಗಳಲ್ಲಿ ನಡೆಸಿದಾಗ ಮಾತ್ರ ಫುಟ್ಬಾಲ್ ಹೆಚ್ಚು ಜನಪ್ರಿಯವಾಗುತ್ತದೆ ಎಂದರು.
ಉದ್ಯಮಿ ಎಸ್.ಎಸ್. ಗಣೇಶ್ ಮಾತನಾಡಿ, ಕ್ರೀಡೆಯಿಂದ ವ್ಯಕ್ತಿಯಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ಕೇವಲ ಶಾಲಾಮಟ್ಟದಲ್ಲಿ ಮಾತ್ರವಲ್ಲದೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಿ ಬೆಳೆಯಬೇಕು. ಅದಕ್ಕೆ ನಿರಂತರ ತಾಲೀಮು ನಡೆಸಬೇಕು ಎಂದು ಸಲಹೆ ನೀಡಿದರು.
ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಕಾಸಲ್ ಎಸ್. ವಿಠ್ಠಲ್, ಕಾಂಗ್ರೆಸ್ ಮಹಿಳಾ ವಿಭಾಗದ ಮುಖ್ಯಸ್ಥೆ ಪುಷ್ಪಾ ಸುರೇಶ್, ಪ್ರಾಂಶುಪಾಲರಾದ ಸುಶ್ಮಿತಾ ಮೊಹಂತಿ ಮತ್ತಿತರರು ಉಪಸ್ಥಿತರಿದ್ದರು.
ಮೀನಾ ಫಾತಿಮಾ ಅತಿಥಿಗಳನ್ನು ಪರಿಚಯಿಸಿದರು. ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.