ಚನ್ನರಾಯಪಟ್ಟಣ: ರಸ್ತೆ ಕಾಮಗಾರಿ ನಿರ್ವಹಣೆ ಕ್ರೆನ್ ಡಿಕ್ಕಿ ಹೊಡೆದು ಬಾಲಕನೊಬ್ಬ ಮೃತಪಟ್ಟು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಉದಯಪುರ ಗ್ರಾಮದ (ರಾಷ್ಟ್ರೀಯ ಹೆದ್ದಾರಿ 48) ಬಳಿ ಗುರುವಾರ ನಡೆದಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಕೂಡ್ಲು ಗ್ರಾಮದ ಯಶವಂತ್ (14) ಮೃತಪಟ್ಟ ಬಾಲಕ. ಗಾಯಾಳು ಬಾಲಕನ ಸಂಬಂಧಿ ಸತೀಶ್ ಬಾಬು ಅವರನ್ನು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಯಶವಂತ್ ಸೇರಿದಂತೆ 9 ಮಂದಿ ಟಾಟಾ ಸಫಾರಿ ವಾಹನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ದರ್ಶನಕ್ಕೆ ಗುರುವಾರ ಹೊರಟಿದ್ದರು. ಉದಯಪುರ ಗ್ರಾಮದ ಬಳಿ ವಾಹನದ ಚಕ್ರ ಪಂಕ್ಚರ್ ಆಯಿತು.
ಚಾಲಕ ಸತೀಶ್ಬಾಬು ವಾಹನದ ಚಕ್ರ ಬದಲಾಯಿಸುತ್ತಿದ್ದರು. ಇವರಿಗೆ ಯಶವಂತ್ ಸಹಾಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದ ಹೆದ್ದಾರಿ ಕಾಮಗಾರಿ ನಿರ್ವಹಣೆ ಕ್ರೆನ್ ಯಶವಂತ್, ಸತೀಶ್ಬಾಬುಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಯಶವಂತ್ ದೇಹ 10 ಅಡಿ ದೂರದಲ್ಲಿ ಬಿದ್ದಿತ್ತು.
ಕ್ರೆನ್ ಚಾಲಕನ ಅಜಾಗರೂಕತೆ, ಅತಿ ವೇಗ ಅಪಘಾತಕ್ಕೆ ಕಾರಣ ಎಂದು ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.