ಶಿವಮೊಗ್ಗ: ಅಗ್ರಶ್ರೇಯಾಂಕದ ಆಟಗಾರ ರೋಹನ್ ಕ್ಯಾಸ್ಟಲಿನೊ ಇಲ್ಲಿ ನಡೆಯುತ್ತಿರುವ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೋಹನ್ 21–11, 21–11 ರಲ್ಲಿ ಅರ್ಜುನ್ ಟಿ ರಾಮ್ ಅವರನ್ನು ಮಣಿಸಿದರು.
ಮೂರು ಮತ್ತು ನಾಲ್ಕನೇ ಶ್ರೇಯಾಂಕದ ಆಟಗಾರರಾದ ಅಭಿಷೇಕ್ ಯೆಲಿಗಾರ್ ಹಾಗೂ ಆರ್. ಆದಿತ್ಯ ಪ್ರಕಾಶ್ ತಮ್ಮ ಎದುರಾಳಿಗಳನ್ನು ಮಣಿಸಿ ಎಂಟರಘಟ್ಟಕ್ಕೆ ಮುನ್ನಡೆದರು.
ಅಭಿಷೇಕ್ 21–14, 21–13 ರಲ್ಲಿ ನಿಖಿಲ್ ವಿರುದ್ಧ ಗೆದ್ದರೆ, ಆದಿತ್ಯ ಪ್ರಕಾಶ್ 21–10, 21–14 ರಲ್ಲಿ ರಾಮೇಶ್ವರ್ ಮಹಾಪಾತ್ರ ಅವರನ್ನು ಮಣಿಸಿದರು.
ಇದೇ ವಿಭಾಗದ ಇತರ 16ರ ಘಟ್ಟದ ಪಂದ್ಯಗಳಲ್ಲಿ ಬಿ.ಆರ್. ಸಂಕೀರ್ತ್ 21–12, 21–3 ರಲ್ಲಿ ಜಿ. ಕಿರಣ್ ಕುಮಾರ್ ವಿರುದ್ಧವೂ, ಕೆ. ಕಾರ್ತಿಕೇಯ 21–19, 18–21, 21–7 ರಲ್ಲಿ ಡಿ. ಅಮಿತ್ ಕುಮಾರ್ ಎದುರೂ, ಕೆ. ಪ್ರಕಾಶ್ ಜಾಲಿ 21–14, 21–10 ರಲ್ಲಿ ಪಿ.ಆರ್. ಹರ್ಷ ಕುಮಾರ್ ಮೇಲೂ, ಡೇನಿಯಲ್ ಫರೀದ್ 21–11, 21–12 ರಲ್ಲಿ ವೆಂಕಟೇಶ್ ಪ್ರಸಾದ್ ಎದುರೂ ಗೆಲುವು ಸಾಧಿಸಿದರು.
ಎಂಟರಘಟ್ಟಕ್ಕೆ ಮೀರಾ: ಅಗ್ರ ಶ್ರೇಯಾಂಕದ ಆಟಗಾರ್ತಿ ಮೀರಾ ಮಹಾದೇವನ್ ಮಹಿಳೆಯರ ಸಿಂಗಲ್ಸ್ ವಿಭಾಗದ ಎಂಟರಘಟ್ಟಕ್ಕೆ ಲಗ್ಗೆಯಿಟ್ಟರು.
ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 21–4, 21–5 ರಲ್ಲಿ ಪ್ರಶಂಸಾ ಭಂಡಾರಿ ವಿರುದ್ಧ ಗೆದ್ದರು. ಎರಡನೇ ಶ್ರೇಯಾಂಕದ ಆಟಗಾರ್ತಿ ವಿ. ರುತ್ ಮಿಶಾ 21–7, 21–15 ರಲ್ಲಿ ರಂಜೀತಾ ಅವರನ್ನು ಮಣಿಸಿದರು.
ಇತರ ಪಂದ್ಯಗಳಲ್ಲಿ ಹರ್ಷಿತಾ ಬಿ. ಶೆಟ್ಟಿ 21–15, 21–14 ರಲ್ಲಿ ಬಿ. ಅನಘಾ ಎದುರೂ, ಆರ್.ಎನ್. ಸವಿತಾ 23–21, 23–21 ರಲ್ಲಿ ಪೂಜಾಶ್ರೀ ಮೇಲೂ, ಅರ್ಶೀನ್ ಸಯೀದ್ ಸಾದತ್ 21–13, 21–3 ರಲ್ಲಿ ಎ. ಸ್ನೇಹಾ ಎದುರೂ, ಜಾಕ್ವೆಲಿನ್ ರೋಸ್ ಕುನ್ನತ್ 21–8, 21–6 ರಲ್ಲಿ ಪ್ರತೀಕ್ಷಾ ಪ್ರಕಾಶ್ ವಿರುದ್ಧವೂ ಗೆಲುವು ಸಾಧಿಸಿದರು.
ಮೀರಾ ಮಹಾದೇವನ್ ಬಾಲಕಿಯರ 19 ವರ್ಷ ವಯಸ್ಸಿನೊಳಗಿನವರ ವಿಭಾಗದ ಸೆಮಿಫೈನಲ್ ಪ್ರವೇಶಿಸುವಲ್ಲೂ ಯಶಸ್ವಿಯಾದರು. ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 21–10, 1–0 (ನಿವೃತ್ತಿ) ರಲ್ಲಿ ಎಸ್. ಪಾರ್ವತಿ ಕೃಷ್ಣನ್ ವಿರುದ್ಧ ಜಯ ಸಾಧಿಸಿದರು.