ಟೋಕಿಯೊ (ಪಿಟಿಐ): ಭಾರತದ ಯುವ ಆಟಗಾರರಾದ ಕೆ. ಶ್ರೀಕಾಂತ್ ಮತ್ತು ಎಚ್.ಎಸ್. ಪ್ರಣೋಯ್ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆದರೆ ಪಿ.ವಿ. ಸಿಂಧು ಹೋರಾಟಕ್ಕೆ ತೆರೆಬಿದ್ದಿದೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಪ್ರಣೋಯ್ 21-14, 13-21, 21-17 ರಲ್ಲಿ ಡೆನ್ಮಾರ್ಕ್ನ ಜಾನ್ ಒ ಜರ್ಗೆನ್ಸನ್ ವಿರುದ್ಧ ಗೆದ್ದರು. ವಿಶ್ವ ರ್ಯಾಂಕ್ನಲ್ಲಿ 56ನೇ ಸ್ಥಾನದಲ್ಲಿರುವ ಪ್ರಣೋಯ್ 53 ನಿಮಿಷಗಳ ಹೋರಾಟದಲ್ಲಿ ಗೆಲುವು ಪಡೆದರು. ಕೆ. ಶ್ರೀಕಾಂತ್ 21-12, 21-16 ರಲ್ಲಿ ಜಪಾನ್ನ ಕಜುತೆರು ಕೊಜಾಯ್ ಅವರನ್ನು ಸೋಲಿಸಿದರು.
ಅಜಯ್ ಜಯರಾಮ್ ಕೂಡಾ ಎಂಟರಘಟ್ಟದಲ್ಲಿ ಸ್ಥಾನ ಪಡೆದರು. ಅವರು 21-13, 11-21, 21-18 ರಲ್ಲಿ ಜಪಾನ್ನ ಯುಯಿಚಿ ಇಕೇದಾ ವಿರುದ್ಧ ಪ್ರಯಾಸದ ಜಯ ಪಡೆದರು. ಈ ಪಂದ್ಯ 55 ನಿಮಿಷಗಳ ಕಾಲ ನಡೆಯಿತು.
ಸಿಂಧುಗೆ ನಿರಾಸೆ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಭರವಸೆ ಎನಿಸಿಕೊಂಡಿದ್ದ ಸಿಂಧು ಎರಡನೇ ಸುತ್ತಿನಲ್ಲಿ ಅನಿರೀಕ್ಷಿತ ಆಘಾತ ಅನುಭವಿಸಿದರು.
ಇಲ್ಲಿ ಎಂಟನೇ ಶ್ರೇಯಾಂಕ ಹೊಂದಿದ್ದ ಸಿಂಧು 6-21, 17-21 ರಲ್ಲಿ ಆತಿಥೇಯ ದೇಶದ ಅಕಾನೆ ಯಮಗುಚಿ ಕೈಯಲ್ಲಿ ಪರಾಭವಗೊಂಡರು. ಆಕರ್ಷಕ ಪ್ರದರ್ಶನ ನೀಡಿದ ಅಕಾನೆ ಕೇವಲ 32 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು.
ಆನಂದ್ ಪವಾರ್ ಕೂಡಾ ಎರಡನೇ ಸುತ್ತಿನಲ್ಲಿ ಸೋತು ಹೊರಬಿದ್ದರು. ವಿಶ್ವದ ಅಗ್ರ ರ್ಯಾಂಕ್ನ ಆಟಗಾರ ಮಲೇಷ್ಯದ ಲೀ ಚೊಂಗ್ ವೀ 21-12, 21-16 ರಲ್ಲಿ ಭಾರತದ ಆಟಗಾರ ವಿರುದ್ಧ ಜಯ ಪಡೆದರು.
ಪುರುಷರ ಡಬಲ್ಸ್ ವಿಭಾಗದಲ್ಲಿ ಕಣದಲ್ಲಿದ್ದ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡ ಎರಡನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು. ನಾಲ್ಕನೇ ಶ್ರೇಯಾಂಕದ ಜೋಡಿ ಚೀನಾದ ಕ್ಸಿಯೊಲಾಂಗ್ ಲಿಯು- ಜಿಹಾನ್ ಕ್ಯು 21-17, 21-16 ರಲ್ಲಿ ಭಾರತದ ಆಟಗಾರರ ವಿರುದ್ಧ ಗೆಲುವು ಪಡೆಯಿತು.
ರ್ಯಾಂಕಿಂಗ್: ಸಿಂಧು ಕುಸಿತ
ನವದೆಹಲಿ (ಪಿಟಿಐ): ಪಿ.ವಿ. ಸಿಂಧು ಬಿಡಬ್ಲ್ಯುಎಫ್ ವಿಶ್ವ ರ್್ಯಾಂಕಿಂಗ್ನಲ್ಲಿ ಎರಡು ಸ್ಥಾನಗಳಷ್ಟು ಕುಸಿತ ಕಂಡಿದ್ದಾರೆ. 10ನೇ ರ್ಯಾಂಕ್ ಹೊಂದಿದ್ದ ಅವರು ನೂತನ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಸೈನಾ ನೆಹ್ವಾಲ್ ತಮ್ಮ ನಾಲ್ಕನೇ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ರ್ಯಾಂಕಿಂಗ್ನಲ್ಲಿ ಪಿ. ಕಶ್ಯಪ್ 14ನೇ ಸ್ಥಾನ ಹೊಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.