ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆ ಕೇಳಲು ಗಡುವು ಸಿದ್ಧಾರ್ಥ್‌ಗೆ ನೋಟಿಸ್

Last Updated 19 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಮೆರಿಕದ ಜೊಹಾಲ್ ಹಮೀದ್ ಎಂಬಾಕೆಯ ಮಾನಭಂಗಕ್ಕೆ ಯತ್ನಿಸಿದ ಆರೋಪ ಹೊತ್ತಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಲೂಕ್ ಪಾಮರ್ಸ್‌ಬ್ಯಾಚ್ ತಮಗೆ ಜಾಮೀನು ಸಿಕ್ಕಿರುವುದಕ್ಕೆ ಸಂತಸಗೊಂಡಿದ್ದರೆ, ಇನ್ನೊಂದೆಡೆ ಆರ್‌ಸಿಬಿ ತಂಡದ ನಿರ್ದೇಶಕ ಸಿದ್ಧಾರ್ಥ್ ಮಲ್ಯ 48 ಗಂಟೆಗಳಲ್ಲಿ ಈ ಮಹಿಳೆಯ ಕ್ಷಮೆ ಕೇಳಬೇಕೆನ್ನುವ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಆರೋಪಿ ಲೂಕ್ ಇಲ್ಲಿನ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಾಮೀನಿಗೆ ಒಪ್ಪಿದ ನ್ಯಾಯಾಲಯವು ರೂ. 30,000 ಮೊತ್ತದ ಎರಡು ಭದ್ರತಾ ಬಾಂಡ್ ನೀಡಲು ಸೂಚಿಸಿತು. ಅಷ್ಟೇ ಅಲ್ಲ ಪಾರ್ಸ್‌ಪೋರ್ಟ್‌ನ್ನು ತನ್ನ ವಶಕ್ಕೆ ನೀಡುವಂತೆಯೂ ಹೇಳಿತು.

ಈ ನಡುವೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಸಂದೇಶ ಹರಿಬಿಟ್ಟ ಸಿದ್ಧಾರ್ಥ್ ತನ್ನ ತೇಜೋವಧೆ ಮಾಡಿದ್ದು, ಅದಕ್ಕಾಗಿ ಕ್ಷಮೆ ಕೇಳಲೇಬೇಕು ಎಂದು ದೂರು ನೀಡಿರುವ ಅಮೆರಿಕ ಮಹಿಳೆಯು ವಕೀಲರ ಮೂಲಕ ನೋಟಿಸ್ ನೀಡಿದ್ದಾರೆ.

`ಸಿದ್ಧಾರ್ಥ್ ನನ್ನ ಚಾರಿತ್ರ್ಯ ಹಾನಿ ಮಾಡಿದ್ದಾರೆ. ಆದ್ದರಿಂದ 48 ಗಂಟೆಯೊಳಗೆ ಅವರು ಕ್ಷಮೆ ಕೋರಬೇಕು~ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಬೇಕೆಂದು ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯೂ)ಕ್ಕೆ  ದೂರು ಕೊಟ್ಟಿದ್ದಾರೆ.

`ಸೋಮವಾರ ಪರಿಶೀಲಿಸಿ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ~ ಎಂದು ಡಿಸಿಡಬ್ಲ್ಯೂ ಅಧ್ಯಕ್ಷೆ ಬರ್ಖಾ ಸಿಂಗ್ ಭರವಸೆ ನೀಡಿದ್ದಾರೆ.

ಭಾರತದ ಕಾನೂನು ಮೇಲೆ ನಂಬಿಕೆ: ಶನಿವಾರ ನ್ಯಾಯಾಲಯಕ್ಕೆ ಹಾಜರಾಗಿದ್ದ ಲೂಕ್ ಪಾಮರ್ಸ್‌ಬ್ಯಾಚ್ ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ `ಭಾರತದ ಕಾನೂನು ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದೆ~ ಎಂದರು.

`ಜಾಮೀನು ಸಿಕ್ಕಿರುವುದು ನನಗೆ ಭಾರತದ ನ್ಯಾಯಾಂಗದಲ್ಲಿ ಹೆಚ್ಚು ವಿಶ್ವಾಸ ಹೊಂದುವಂತೆ ಮಾಡಿದೆ. ನನ್ನ ಅರ್ಜಿಯನ್ನು ನ್ಯಾಯಾಧೀಶರು ಪರಿಗಣಿಸಿದ್ದರಿಂದ ನಾನು ಸಮಾಧಾನದಿಂದ ಇರಲು ಸಾಧ್ಯವಾಗಿದೆ~ ಎಂದ ಅವರು `ಆಸ್ಟ್ರೇಲಿಯಾದಲ್ಲಿರುವ ನನ್ನ ಕುಟುಂಬದ ಸದಸ್ಯರು ಹಾಗೂ ಸ್ನೇಹಿತೆಯಿಂದ ಇಂಥ ಪರಿಸ್ಥಿತಿಯಲ್ಲಿ ಸಿಕ್ಕಿರುವ ಬೆಂಬಲ ಅಪಾರ. ಅಷ್ಟೇ ಅಲ್ಲ ಆರ್‌ಸಿಬಿ ತಂಡದ ಆಡಳಿತ ಕೂಡ ನೆರವಿಗೆ ನಿಂತಿದೆ~ ಎಂದರು.

`ಪ್ರಕರಣದ ತನಿಖೆಯ ಪರಿಣಾಮವನ್ನು ಎದುರು ನೋಡುತ್ತಿದ್ದೇನೆ. ನನ್ನ ವಿರುದ್ಧ ಮಾಡಲಾಗಿರುವ ಆರೋಪಗಳಿಂದ ಬೇಸರವಾಗಿದೆ. ಮುಂಬರುವ ದಿನಗಳಲ್ಲಿ ತನಿಖೆ ಎತ್ತ ಸಾಗುತ್ತದೆಂದು ಕಾಯ್ದು ನೋಡಬೇಕು~ ಎಂದು ನುಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT