ಬೆಂಗಳೂರು: `ರಾಜಧಾನಿಯ್ಲ್ಲಲಿ ಕನ್ನಡದ ಕೂಗು, ಕನ್ನಡಿಗರ ಸಂಖ್ಯೆ ಹಾಗೂ ಕನ್ನಡದ ಪರಿಕಲ್ಪನೆ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಿರುವುದು ಆತಂಕದ ಬೆಳವಣಿಗೆ' ಎಂದು ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ್ ಕಳವಳ ವ್ಯಕ್ತಪಡಿಸಿದರು.
ಚಾಮರಾಜಪೇಟೆಯಲ್ಲಿ ಸೋಮವಾರ ಅನಿಕೇತನ ಕನ್ನಡ ಬಳಗ ಏರ್ಪಡಿಸಿದ್ದ ಜಯದೇವಿತಾಯಿ ಲಿಗಾಡೆಯವರ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
`ಬೆಂಗಳೂರಿನಲ್ಲಿ ಇಂದು ಕನ್ನಡಕ್ಕೆ ಈ ಸ್ಥಿತಿ ಬಂದಿರುವುದರಿಂದ ಕನ್ನಡಿಗರು ಹತಾಶರಾಗಬೇಕಿಲ್ಲ. ಮುಂದಿನ ದಿನಗಳಲ್ಲಿ ಕನ್ನಡಪರ ಸಂಘಟನೆಗಳು ಸಂಜೀವಿನಿಯ ರೀತಿಯಲ್ಲಿ ಕನ್ನಡ ಉಳಿಸಲು ಹೋರಾಟ ಹಮ್ಮಿಕೊಳ್ಳಬೇಕು. ಜಯದೇವಿತಾಯಿ ಲಿಗಾಡೆಯವರ ಚಳವಳಿ ಅದಕ್ಕೆ ಪ್ರೇರಣೆಯಾಗಬೇಕು' ಎಂದು ಹೇಳಿದರು.
`ಮರಾಠ ನೆಲ ಸೋಲಾಪುರದಲ್ಲಿ ಹುಟ್ಟಿದ ಜಯದೇವಿತಾಯಿ ಅವರು, ತನ್ನ ಬದುಕನ್ನು ಕನ್ನಡ ನೆಲಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರ ವ್ಯಕ್ತಿತ್ವ, ಸರಳ ಜೀವನ, ಕನ್ನಡದ ಕಲ್ಪನೆ, ಗಡಿನಾಡಿನ ಬಗೆಗಿನ ಕಾಲಜಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಸಿದ್ದರಾಮನ ಭಕ್ತೆಯಾಗಿದ್ದ ಅವರು, ತ್ರಿಪದಿಯಲ್ಲಿ ಪುರಾಣ ಬರೆದು ಸಾಹಿತ್ಯ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆಯನ್ನು ನೀಡಿದ್ದಾರೆ' ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡಪರ ಚಿಂತಕ ಗಿರೀಶ್ ಗೌಡ, ಅನಿಕೇತನ ಕನ್ನಡ ಬಳಗದ ಕೋಶಾಧ್ಯಕ್ಷ ಎಂ.ತಿಮ್ಮಯ್ಯ, ಅಧ್ಯಕ್ಷ ಮಾಯಣ್ಣ ಉಪಸ್ಥಿತರಿದ್ದರು.
ಸನ್ಮಾನ: ಕಾರ್ಯಕ್ರಮದಲ್ಲಿ ಕನ್ನಡ ಹೋರಾಟಗಾರರಾದ ನಾ.ಶ್ರೀಧರ, ಗೋಮೂರ್ತಿ ಯಾದವ್, ಸಿದ್ದರಾಮೇಗೌಡ, ದಯಾನಂದ ಕಟ್ಟೆ, ಸಾಹಿತಿ ಎಸ್.ಜಿ.ಮಾಲತಿ ಶೆಟ್ಟಿ, ಅರಳೇಪೇಟೆ ಮಿತ್ರಬಳಗದ ಅಧ್ಯಕ್ಷ ಪಾಂಡುರಂಗ, ಕನ್ನಡ ಉಪನ್ಯಾಸಕ ಎಂ.ನಾಗರಾಜು, ಬಿಬಿಎಂಪಿ ನಿವೃತ್ತ ನೌಕರರಾದ ಜಯರಾಮ್, ಹುಚ್ಚಪ್ಪ, ಲಕ್ಷ್ಮಣ, ಮಹದೇವಮ್ಮ ಅವರನ್ನು ಸನ್ಮಾನಿಸಲಾಯಿತು.