ಮಂಡ್ಯ: ಸಾತ್ವಿಕ ಮತ್ತು ಮೌಲ್ವಿಕ ವಿಚಾರಗಳ ಕುರಿತು ಚಿಂತನ-ಮಂಥನ ನಡೆಸುವುದು ಪ್ರಸ್ತುತ ದಿನಗಳಲ್ಲಿ ಕಡಿಮೆ ಆಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜನಗರ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಮಲೆಯೂರು ಗುರುಸ್ವಾಮಿ ಅವರು ಅಭಿಪ್ರಾಯಪಟ್ಟರು.ನಗರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮ.ಸಿ.ನಾರಾಯಣ ಅವರ ‘ಆದಿ ಜಾಂಬವ ಸಂತರು -ಒಂದು ಜಾನಪದೀಯ ಅಧ್ಯಯನ’ ಹಾಗೂ ಮಲ್ಲಿಕಾ ಮಳವಳ್ಳಿ ಅವರ ‘ಆಧುನಿಕ ವಚನಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಧರ್ಮ, ಜಾತಿ, ವರ್ಗಗಳಿಗೆ ಸೀಮಿತವಾದ ಆಲೋಚನೆಗಳೇ ಸಮಾಜವನ್ನು ಆಕ್ರಮಿಸಿದೆ. ಇಂಥಹ ನಕರಾತ್ಮಕ ಬೆಳವಣಿಗೆಗಳ ಮಧ್ಯೆ ಸಾತ್ವಿಕ, ಮೌಲ್ವಿಕ ಕುರಿತ ಚರ್ಚೆಗಳು ಜನಸಮೂಹದಲ್ಲಿ ಕ್ಷೀಣಿಸಿವೆ ಎಂದು ಹೇಳಿದರು.‘ಮ.ಸಿ.ನಾರಾಯಣ ಅವರ ಕೃತಿ ಸಂಶೋಧನ್ಮಾಕವಾಗಿದ್ದರೆ, ನವ ಸಮಾಜವನ್ನು ಉತ್ತಮವಾಗಿ ಹೇಗೆ ನಿರ್ಮಾಣ ಮಾಡಬಹುದು ಎಂಬುದನ್ನು ವಚನ ರೂಪದಲ್ಲಿ ಮಲ್ಲಿಕಾ ಅವರು ಕಟ್ಟಿಕೊಟ್ಟಿದ್ದಾರೆ. ಈ ಎರಡೂ ಕೃತಿಗಳು ಓದುಗರನ್ನು ಚಿಂತನೆಗೆ ಅಚ್ಚುತ್ತವೆ’ ಎಂದು ಹೇಳಿದರು.
ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಡಾ. ಎಚ್.ಎಸ್.ಮುದ್ದೇಗೌಡರು ಉದ್ಘಾಟಿಸಿದರು. ಕೃತಿಗಳನ್ನು ಕುರಿತು ಜಾನಪದ ಸಂಶೋಧಕ ವ.ನಂ. ಶಿವರಾಮು ಮತ್ತು ನಿವೃತ್ತ ಪ್ರಾಚಾರ್ಯ ಡಾ. ಅರ್ಜುನಪುರಿ ಅಪ್ಪಾಜಿಗೌಡ ಅವರು ಮಾತನಾಡಿದರು.ಬಾಬೂ ಜಗಜೀವನರಾಂ ಅಧ್ಯಯನ ಪೀಠದ ಸಂದರ್ಶಿಕ ಪ್ರಾಧ್ಯಾಪಕ ಪ್ರೊ. ಟಿ. ಯಲ್ಲಪ್ಪ ಬೂತಯ್ಯ, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.