ಬೆಂಗಳೂರು: `ಖಜಾನೆ ಇಲಾಖೆಯಲ್ಲಿ ಅಂಗವಿಕಲರಿಗೆ ಕಟ್ಟಡವನ್ನು ಪ್ರವೇಶಿಸಲು ಸಹಾಯವಾಗುವಂತಹ ಯಾವುದೇ ರ್ಯಾಂಪ್, ರೇಲಿಂಗ್ ವ್ಯವಸ್ಥೆ ಇಲ್ಲ. ಸರಿಯಾದ ಶೌಚಾಲಯವಿಲ್ಲ'
ಇದು ಅಂಗವಿಕಲ ಅಧಿನಿಯಮ ಇಲಾಖೆಯ ರಾಜ್ಯ ಸಹಾಯಕ ಆಯುಕ್ತರಾದ ಎಚ್.ಮಾನಸದೇವಿ ಮತ್ತು ಅಂಗವಿಕಲ ಕಲ್ಯಾಣ ಇಲಾಖೆಯ ಎಂಜಿನಿಯರ್ ಮರಿಯಪ್ಪ ಶುಕ್ರವಾರ ನಗರದ ಮೈಶುಗರ್ ಕಟ್ಟಡದಲ್ಲಿರುವ ಜಿಲ್ಲಾ ಖಜಾನೆ ಇಲಾಖೆಗೆ ಭೇಟಿ ನೀಡಿದಾಗ ಕಂಡುಬಂದ ಸತ್ಯ.
`ಇಲಾಖೆಯ ಕಚೇರಿಯು ಮೈಶುಗರ್ ಕಟ್ಟಡದ ಮೂರನೇ ಮಹಡಿಯಲ್ಲಿದೆ. ತಮ್ಮ ಪಿಂಚಣಿ, ಕುಂದು - ಕೊರತೆಗಳನ್ನು ವಿಚಾರಿಸಲು ಬರುವ ಅಂಗವಿಕಲರು ಮತ್ತು ಹಿರಿಯ ನಾಗರೀಕರಿಗೆ ಕಚೇರಿಗೆ ಹೋಗಲು ಯಾವುದೇ ಲಿಫ್ಟ್ ವ್ಯವಸ್ಥೆ ಇಲ್ಲ. ಇರುವ ಲಿಫ್ಟ್ ಕೂಡ ಏಳು ವರ್ಷಗಳಿಂದ ಕೆಲಸ ಮಾಡುತ್ತಿಲ್ಲ' ಎಂದು ಪರಿಶೀಲನೆ ನಂತರ ತಿಳಿಸಿದರು.
`ಈ ಕುರಿತು ಮೈಶುಗರ್ ಕಟ್ಟಡದ ಸಹಾಯಕ ವ್ಯವಸ್ಥಾಪಕ ಗಂಗಾಧರ್ ಅವರಿಗೆ ಪರಿಶೀಲನಾ ಪತ್ರ ಸಲ್ಲಿಸಲಾಗಿದ್ದು, ಕಟ್ಟಡದಲ್ಲಿ ಶೀಘ್ರವೇ ಅಂಗವಿಕಲರಿಗೆ ಬೇಕಾದ ಸೌಲಭ್ಯವನ್ನು ಒದಗಿಸಲು ಸೂಚಿಸಲಾಗಿದೆ' ಎಂದರು.
`ಅಂಗವಿಕಲರಿಗೆ ಅನುಕೂಲವಾಗುವಂತೆ ಖಜಾನೆ ಇಲಾಖೆಯನ್ನು ಸ್ಥಳಾಂತರಿಸಲು ಸುಮಾರು 56 ಕಟ್ಟಡಗಳನ್ನು ಪರಿಶೀಲಿಸಲಾಗಿತ್ತು. ಆದರೆ ಎಲ್ಲಿಯೂ ಸರಿಯಾದ ಸ್ಥಳ ಸಿಗಲಿಲ್ಲ. ಈಗ ಕಂದಾಯ ಇಲಾಖೆಯ ಕೆಳಮಹಡಿಗೆ ಖಜಾನೆ ಇಲಾಖೆಯನ್ನು ಸ್ಥಳಾಂತರಿಸಲು ಸಿದ್ಧತೆ ನಡೆಯುತ್ತಿದೆ. ಇನ್ನೆರಡು ತಿಂಗಳಲ್ಲಿ ಇಲಾಖೆ ಸ್ಥಳಾಂತರ ಕಾರ್ಯ ಪೂರ್ಣಗೊಳ್ಳಲಿದೆ' ಎಂದು ಜಿಲ್ಲಾ ಖಜಾನೆ ಇಲಾಖೆಯ ಸಹ ಕಾರ್ಯದರ್ಶಿ ಉಮಾದೇವಿ ಹೇಳಿದರು.
`2007ರಿಂದ ಪಿಂಚಣಿ ಹಣ ಬಂದಿಲ್ಲ. ಖಜಾನೆ ಇಲಾಖೆಯಲ್ಲಿಯೂ ಅಂಗವಿಕಲರಿಗೆ ಅನುಕೂಲವಾಗುವ ಸೌಲಭ್ಯಗಳಿಲ್ಲ. ಮೂರನೇ ಮಹಡಿಯಲ್ಲಿರುವ ಕಚೇರಿಗೆ ಹೋಗಲು ಸಾಧ್ಯವಾಗುವುದಿಲ್ಲ' ಎಂದು ಕೋಣನಕುಂಟೆಯ ಅಂಗವಿಕಲರಾದ ಸುಧೀಂದ್ರ ತಮ್ಮ ಅಳಲು ತೋಡಿಕೊಂಡರು.