ನವದೆಹಲಿ (ಐಎಎನ್ಎಸ್): ರಜತ ಮಹೋತ್ಸವ ಆಚರಿಸಿಕೊಂಡಿರುವ ದೇಶದ ಅತ್ಯಂತ ಹಳೆಯದಾದ ಪ್ರತಿಷ್ಠಿತ ಖರಗ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ-ಕೆಜಿಪಿ) ಮುಖ್ಯಸ್ಥರಿಲ್ಲದೆ ಒಂದು ವರ್ಷ ಕಳೆದಿದೆ. ಖಾಲಿಯಾಗಿರುವ ಹುದ್ದೆಯನ್ನು ತುಂಬಲು ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಹಳೆಯ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ನಲ್ಲಿ ಮಾತ್ರವಲ್ಲ, ದೆಹಲಿ, ಕೋಲ್ಕತ್ತ ಮತ್ತು ಬೆಂಗಳೂರಿನಲ್ಲಿ ಧರಣಿ, ಉಪವಾಸ ಸತ್ಯಾಗ್ರಹ, ಮೌನ ಮೆರವಣಿಗೆ ಹಾಗೂ ಪ್ರತಿಭಟನೆ ನಡೆಸಿದ್ದಾರೆ. ಆದರೂ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ದೇಶದ ಪ್ರಮುಖ ಹಾಗೂ ಪ್ರತಿಷ್ಠಿತ ಸಂಸ್ಥೆಯೊಂದು ನಿರ್ದೇಶಕರಿಲ್ಲದೆ ಒಂದು ವರ್ಷ ಕಳೆದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈಗಿರುವ ಹಂಗಾಮಿ ನಿರ್ದೇಶಕರು ಪ್ರಮುಖ ನಿರ್ಣಯ ಕೈಗೊಳ್ಳುವಂತಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ.