ನವದೆಹಲಿ: ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಮಸೂದೆ ಅಂಗೀಕಾರಕ್ಕೆ ಪ್ರಯತ್ನಿಸುತ್ತಿರುವ ಸರ್ಕಾರವನ್ನು ‘ಕಾಡುವ’ ಕೆಲಸವನ್ನು ಕಾಂಗ್ರೆಸ್ ಮತ್ತೆ ಮುಂದುವರಿಸಿದೆ. ಮಸೂದೆ ಬಗ್ಗೆ ಎದ್ದಿರುವ ವಿವಾದ ಬಗೆಹರಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ಜತೆ ಸೋಮವಾರ ನಡೆಯಬೇಕಿದ್ದ ಸಭೆಯನ್ನು ಕಾಂಗ್ರೆಸ್ ಮುಂದೂಡಿದೆ.
ಸೋಮವಾರ ಮಧ್ಯಾಹ್ನ ಭೋಜನದ ವೇಳೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಜ್ಯೋತಿರಾದಿತ್ಯ ಸಿಂಧಿಯಾ ಅವರು ಜೇಟ್ಲಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಜತೆ ಸೇರಿದ್ದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಹಾಜರಿಲ್ಲ ಎಂಬ ಕಾರಣ ಮುಂದಿಟ್ಟ ವಿರೋಧ ಪಕ್ಷದ ನಾಯಕರು, ಸಭೆಯನ್ನು ಮುಂದೂಡುವುದಾಗಿ ತಿಳಿಸಿದರು.
ಕರ್ನಾಟಕಕ್ಕೆ ತೆರಳಿದ್ದ ಖರ್ಗೆ ಅವರು ಸೋಮವಾರ ಮಧ್ಯಾಹ್ನದವರೆಗೂ ದೆಹಲಿಗೆ ವಾಪಸಾಗಿರಲಿಲ್ಲ. ‘ಎಲ್ಲರೂ ಇದ್ದಾಗ ಈ ಬಗ್ಗೆ ಚರ್ಚೆ ನಡೆಯಲಿ. ಸಭೆಗೆ ಹೊಸ ದಿನಾಂಕ ನಿಗದಿಪಡಿಸೋಣ’ ಎಂದು ಜೇಟ್ಲಿ ಹಾಗೂ ವೆಂಕಯ್ಯ ನಾಯ್ಡು ಅವರಲ್ಲಿ ವಿರೋಧ ಪಕ್ಷದ ನಾಯಕರು ಕೇಳಿಕೊಂಡರು.