ಯಾದಗಿರಿ: ತಾಲ್ಲೂಕಿನ ಕಾಳೆಬೆಳಗುಂದಿ, ಅಲ್ಲಿಪೂರ, ಹತ್ತಿಕುಣಿ ಗ್ರಾ.ಪಂ.ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಒಬ್ಬರೇ ಈ ಮೂರು ಪಂಚಾಯಿತಿಗಳ ಪ್ರಭಾರ ವಹಿಸಿಕೊಂಡಿದ್ದು, ಸದರಿ ಗ್ರಾ.ಪಂ.ಗಳ ಉದ್ಯೋಗ ಖಾತರಿ ಯೋಜನೆಯಡಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಕುರಿತು ಜೈ ಕರ್ನಾಟಕ ಸಂಘ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು.
ಭೌತಿಕವಾಗಿ ಕಾಮಗಾರಿ ಮುಗಿಸದೇ ಈ ಕಾಮಗಾರಿಗಳಿಗೆ ಹಣ ಪಡೆದಿದ್ದಾರೆ. ಇದೇರೀತಿ ಎಲ್ಲ ಯೋಜನೆಗಳಲ್ಲಿ ಬಂದ ಅನುದಾನವನ್ನು ಸಾರ್ವಜನಿಕರ ಅಭಿವೃದ್ಧಿ ಮಾಡದೇ, ಹಣ ದುರುಪಯೋಗ ಪಡಿಸಿಕೊಂಡು ಭಾರಿ ಭ್ರಷ್ಟಾಚಾರ ಎಸಗಿದ್ದಾರೆ. ಕಾಳೆಬೆಳಗುಂದಿ ಗ್ರಾ.ಪಂ.ಯಲ್ಲಿ ಅಂದಾಜು 34 ಲಕ್ಷ ಹಣ ಡ್ರಾ ಮಾಡಲಾಗಿದೆ, ಅಲ್ಲಿಪೂರ ಗ್ರಾ.ಪಂ.ಯಲ್ಲಿ ಅಂದಾಜು 10 ಲಕ್ಷ ಹಣ ಡ್ರಾ ಮಾಡಿದ್ದಾರೆ.
ಸದರಿ ಅಧಿಕಾರಿಗಳು ಪ್ರತಿ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಶೇ 10 ರಷ್ಟು ಲಂಚ ಪಡೆದು ಕಾಮಗಾರಿ ಪರಿಶೀಲಿಸದೇ ಚೆಕ್ ವಿತರಿಸುತ್ತಿದ್ದಾರೆ ಎಂದು ದೂರಲಾಗಿದೆ. ಈ ಕುರಿತು ವೆಂಕಟೇಶ ತುಳೇರ ಮಹಾದೇವಪ್ಪ ಗಣಪುರ ಭೀಮಣ್ಣ ಹೊಸ್ಮನಿ ಚಂದ್ರಶೇಖರ ಮುಂತಾದವರು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು,