ಶಿಕಾರಿಪುರ: ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಮಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಗಾಮ ಗ್ರಾಮದ ಕೂಲಿ ಕಾರ್ಮಿಕರು ತಾಲ್ಲೂಕು ಪಂಚಾಯ್ತಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.ಗ್ರಾಮದಲ್ಲಿ ಕೂಲಿಕಾರರಿಗೆ ಕೆಲಸ ನೀಡುತ್ತಿಲ್ಲ ಬದಲಿಗೆ ಉಳ್ಳವರಿಗೆ ಈಗಾಗಲೇ ಹೆಚ್ಚು ದಿನ ಕೆಲಸ ಮಾಡಿದರಿಗೆ ಕೆಲಸ ನೀಡುತ್ತಿದ್ದು, ಇದರಿಂದ ನಮಗೆಲ್ಲಾ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎಂದಿನಂತೆ ಇಂದೂ ಕೂಲಿ ಕೆಲಸಕ್ಕಾಗಿ ತೆರಳಿದ್ದು, ಕೊನೆ ಕ್ಷಣದಲ್ಲಿ ಗ್ರಾ.ಪಂ. ಕಾರ್ಯದರ್ಶಿ ಕೆಲಸವಿಲ್ಲವೆಂದು ವಾಪಸ್ ಕಳುಹಿಸಿದ್ದು, ಕೆಲ ರೈತರಿಗೆ ಮಾತ್ರ ಉದ್ಯೋಗ ನೀಡಿದ್ದು ತಾರತಮ್ಯ ಎಸಗಿದ್ದಾರೆ. ಇಂತಹ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ತಿರುಮಲೇಶ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರಲ್ಲದೇ ಉದ್ಯೋಗ ನೀಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯವಾಯಿತು.