ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕಾರ್ಮಿಕ ಸಚಿವ ಪರಮೇಶ್ವರ ನಾಯಕ ಅವರು ಖಾಸಗಿ ಐ.ಟಿ.ಐ.ಗಳಿಗೆ ಇನ್ನು ಮುಂದೆ ವಿದ್ಯಾರ್ಥಿ ಕೇಂದ್ರಿತ ಅನುದಾನ ಕೊಡಲಾಗುವುದು ಎಂದು ಹೇಳಿದ್ದಾರೆ. ಈ ಹೇಳಿಕೆ, ೮-–೧೦ ವರ್ಷಗಳಿಂದ ಕೆಲಸ ಮಾಡಿದ ಸಿಬ್ಬಂದಿಯಲ್ಲಿ ಹತಾಶೆ ಮೂಡಿಸಿದೆ.
ಏಕೆಂದರೆ ಏಳು ವರ್ಷ ಪೂರೈಸಿದ ಖಾಸಗಿ ಐ.ಟಿ.ಐ.ಗಳಿಗೆ ಸಿಬ್ಬಂದಿ ಆಧಾರಿತ ಅನುದಾನ ಕೊಡಲಾಗುವುದೆಂದು ೧೯೯೭ರಲ್ಲಿ ಅಂದಿನ ಜನತಾದಳ ಸರ್ಕಾರ ಆದೇಶ ಹೊರಡಿಸಿ ಆಗ ೧೦೪ ಐ.ಟಿ.ಐ.ಗಳಿಗೆ ಅನುದಾನ ನೀಡಿತ್ತು. ಜೊತೆಗೆ ಮುಂದೆ ಬರುವಂತಹ ಐ.ಟಿ.ಐ.ಗಳಿಗೂ ಇದನ್ನು ವಿಸ್ತರಿಸಲಾಗುವುದೆಂದು ತಿಳಿಸಿತ್ತು. ಇದನ್ನು ನಂಬಿಕೊಂಡೇ ಸಂಸ್ಥೆಗಳು ಐ.ಟಿ.ಐ.ಗಳನ್ನು ಸ್ಥಾಪಿಸಿವೆ. ಸಿಬ್ಬಂದಿಗೆ ವೇತನ ಅನುದಾನದ ಭರವಸೆ ಕೊಟ್ಟಿವೆ.
ಈಗಿನ ಮುಖ್ಯಮಂತ್ರಿಗಳು ಆಗಿನ ಹಣಕಾಸು ಸಚಿವರು ಎಂಬುದು ಗಮನಾರ್ಹ. ಈಗಾಗಲೇ ೨೦೦೧ರ ಪೂರ್ವದಲ್ಲಿ ಸ್ಥಾಪನೆಯಾದ ೧೯೯ ಐ.ಟಿ.ಐ.ಗಳು ವೇತನಾನುದಾನಕ್ಕೆ ಒಳಪಟ್ಟಿದ್ದು ನಂತರದಲ್ಲಿ ಏಳು ವರ್ಷ ಕಳೆದಿರುವ ಐ.ಟಿ.ಐ.ಗಳು ಕೂಡ ೧೯೯೭ರ ಆದೇಶದಂತೆ ಸರ್ಕಾರದ ವೇತನಾನುದಾನಕ್ಕೆ ಅರ್ಹತೆ ಪಡೆದಿವೆ. ಇನ್ನು ವಿದ್ಯಾರ್ಥಿ ಕೇಂದ್ರಿತ ಅನುದಾನವೆಂಬುದು ಪಿ.ಎಸ್.ಎಸ್ ಥಾಮಸ್ ಆಯೋಗವು ೨೦೦೭ರಲ್ಲಿ ಶಿಫಾರಸು ಮಾಡಿದ ಅನುದಾನಗಳಲ್ಲಿ ಒಂದು. ಅದರಂತೆ ಇದನ್ನು ಹೊಸದಾಗಿ ಸ್ಥಾಪನೆಯಾದ ಐ.ಟಿ.ಐ.ಗಳ ಸಿಬ್ಬಂದಿಗೆ ವಿದ್ಯಾರ್ಥಿಗಳ ಸಂಖ್ಯಾಧಾರದ ಮೇಲೆ ಗೌರವಧನವಾಗಿ ಕೊಡುವುದು.
ಇನ್ನೊಂದು, ಏಳು ವರ್ಷ ಪೂರೈಸಿದ ಐ.ಟಿ.ಐಗಳಿಗೆ ವೇತನ ಅನುದಾನವನ್ನೇ ನೀಡುವುದು. ವರದಿಯನ್ನು ತಡವಾಗಿ ಅರ್ಥ ಮಾಡಿಕೊಂಡ ಹಿಂದಿದ್ದ ಸರ್ಕಾರದ ಕಾರ್ಮಿಕ ಸಚಿವರು ೨೦೧೨ರಲ್ಲಿ ೪೪೩ ಐ.ಟಿ.ಐ.ಗಳಿಗೆ ವೇತನ ಅನುದಾನ ಕೊಡಲು ಬದ್ಧ ಎಂದು ಹೇಳಿದ್ದರು. ಆದರೆ ಇಂದಿನ ಕಾರ್ಮಿಕ ಸಚಿವರು ವಿದ್ಯಾರ್ಥಿ ಕೇಂದ್ರಿತ ಅನುದಾನ ಕೊಡುವುದಾಗಿ ಹೇಳಿದ್ದು ಸರಿಯಲ್ಲ. ಇಂದು ಉದ್ಯೋಗಾಧಾರಿತ ಹಾಗೂ ಸ್ವಾವ ಲಂಬನೆ ಶಿಕ್ಷಣದ ಅಗತ್ಯವನ್ನು ತಜ್ಞರು ಒತ್ತಿ ಹೇಳುತ್ತಿರುವಾಗ ಇಂಥ ಶಿಕ್ಷಣ ತರಬೇತಿಯಲ್ಲಿ ತೊಡಗಿರುವ ತಂತ್ರಜ್ಞರನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಇನ್ನಾದರೂ ಸರ್ಕಾರ ವೇತನ ಅನುದಾನ ಮುಂದುವರಿಸುವ ತೀರ್ಮಾನ ಕೈಗೊಳ್ಳುವುದು ನ್ಯಾಯೋಚಿತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.