ನವದೆಹಲಿ, (ಪಿಟಿಐ): ಖಾಸಗಿ ವಲಯದಲ್ಲಿನ ಭ್ರಷ್ಟಾಚಾರವನ್ನು ಅಪರಾಧವೆಂದು ಪರಿಗಣಿಸಿ ಅದನ್ನೂ ಕಾನೂನಿನ ತೆಕ್ಕೆಗೆ ತರಲು ಸರ್ಕಾರ ಚಿಂತಿಸುತ್ತಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಶುಕ್ರವಾರ ಇಲ್ಲಿ ಹೇಳಿದ್ದಾರೆ.
ಸಿಬಿಐ ಮತ್ತು ರಾಜ್ಯಗಳಲ್ಲಿನ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳ ದೈವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವಿಶ್ವಸಂಸ್ಥೆಯ ಸಮಾವೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಭಾರತವು ಒಪ್ಪಿಕೊಂಡಿದೆ. ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು.
ವಿಶ್ವ ಸಂಸ್ಥೆಯ ಸಮಾವೇಶದಲ್ಲಿನ ನಿರ್ಣಯಗಳಿಗೆ ಪೂರಕವಾಗುವಂತೆ ವಿದೇಶದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವುದು ಅಪರಾಧವೆಂದು ಗುರುತಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಅದೇ ಬಗೆಯಲ್ಲಿ ಖಾಸಗಿ ವಲಯದ ಲಂಚವನ್ನು ಅಪರಾಧವೆಂದು ಪರಿಗಣಿಸಲು ಹಾಗೂ ಕಾನೂನಿನಲ್ಲಿ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಕುರಿತು ಮತ್ತಷ್ಟು ವಿವರವನ್ನು ಬಹಿರಂಗಪಡಿಸದ ಅವರು, ಪ್ರತಿ ವರ್ಷ ನಡೆಯುವ ಸಾವಿರಾರು ಕೋಟಿ ರೂಗಳ ಸರ್ಕಾರಿ ಕಾಮಗಾರಿಗಳ ಹಂಚಿಕೆಯಲ್ಲಿನ ಅಕ್ರಮಗಳ ತಡೆಗೆ, ಸರ್ಕಾರಿ ಅಧಿಕಾರಿಗಳ ಸ್ವಂತ ವಿವೇಚನಾ ಅಧಿಕಾರವನ್ನು ಕಡಿಮೆ ಮಾಡುವ ಮಾರ್ಗಕಂಡುಕೊಳ್ಳುವಲ್ಲಿ ಸರ್ಕಾರ ಉತ್ಸುಕವಾಗಿದೆ ಎಂದರು.