ಬಸವಕಲ್ಯಾಣ: ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿ ಕೊಡುವಾಗ ಹೆಚ್ಚಿನ ಅಧಿಕಾರ ಸರ್ಕಾರದ ಹತ್ತಿರ ಇರುವಂತೆ ನಿಯಮ ರೂಪಿಸಬೇಕು ಎಂದು ಎಬಿವಿಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಒಡೆಯರ ಆಗ್ರಹಿಸಿದ್ದಾರೆ.
ಈ ಸಂಬಂಧ ಸೋಮವಾರ ಎಬಿವಿಪಿಯಿಂದ ಇಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಖಾಸಗಿ ವಿಶ್ವವಿದ್ಯಾಲಯಗಳ ಪ್ರವೇಶ ನೀತಿ, ಶುಲ್ಕನೀತಿ ಸಿಇಟಿ ಮಾದರಿಯಂತೆ ಇರಬೇಕು. ಕುಲಪತಿ ಮತ್ತು ಕುಲಸಚಿವರ ನೇಮಕಾತಿಯ ಶೇ 50 ರಷ್ಟು ಅಧಿಕಾರ ಸರ್ಕಾರದ ಹತ್ತಿರ ಇರುವಂತೆ ನೋಡಿಕೊಳ್ಳಬೇಕು ಎಂದರು.
ಎಬಿವಿಪಿ ರಾಜ್ಯ ಸಮಿತಿ ಸದಸ್ಯ ರುದ್ರೇಶ ಪಾಟೀಲ ಮಾತನಾಡಿ ಖಾಸಗಿ ವಿಶ್ವವಿದ್ಯಾಲಯಗಳು ಹುಟ್ಟಿಕೊಂಡಾಗ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಬೆಲೆ ಇರುವುದಿಲ್ಲ. ಹಣ ಇದ್ದವರಿಗೆ ಮಾತ್ರ ಉನ್ನತ ಶಿಕ್ಷಣ ದೊರೆಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಸಂಚಾಲಕ ದಿಗಂಬರ ಬೊಕ್ಕೆ ಮಾತನಾಡಿದರು. ನಗರ ಕಾರ್ಯದರ್ಶಿ ಲೋಕೇಶ ಮೊಳಕೇರೆ, ರಮೇಶ ತೊಗರಖೇಡೆ, ಪರಮೇಶ್ವರ ಮಠಪತಿ, ಅಮೀತ ಚಹ್ವಾಣ, ಅಂಬರೀಶ ಸ್ವಾಮಿ, ಸಂತೋಷ ಮಾಲೆ, ಸಂಗಮೇಶ ಖಂಡಾಳೆ, ಸಂಜೀವ ರಾಠೋಡ, ಶ್ರೀನಿವಾಸ ಬೊಂಡೆ, ಸಂಗಮೇಶ ಭೋಸಗಾ, ವೀರೇಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು. ನಂತರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.