ಬೆಂಗಳೂರು: `ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಕೀಳರಿಮೆ ಬೆಳೆಸಿಕೊಳ್ಳಬಾರದು. ಸರ್ಕಾರದ ಎಲ್ಲಾ ಸೌಕರ್ಯಗಳನ್ನೂ ಬಳಸಿ ಉತ್ತಮ ಕಲಿಕೆಯ ಕಡೆಗೆ ಹೆಚ್ಚು ಗಮನ ನೀಡಬೇಕು~ ಎಂದು ಮಹಾಲಕ್ಷ್ಮಿಪುರಂ ವಿಧಾನ ಸಭಾ ಕ್ಷೇತ್ರದ ಶಾಸಕ ನೆ.ಲ.ನರೇಂದ್ರಬಾಬು ಕರೆ ನೀಡಿದರು.
ನಗರದಲ್ಲಿ ಬುಧವಾರ ಕೃಷ್ಣಾನಂದನಗರದ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, `ಖಾಸಗಿ ಶಾಲೆಯ ವ್ಯಾಮೋಹವನ್ನು ಪೋಷಕರು ಬಿಡಬೇಕು~ ಎಂದರು.
`ಬಡ ಮಕ್ಕಳೇ ಹೆಚ್ಚಾಗಿ ಬರುವ ಕೃಷ್ಣಾನಂದನಗರದ ಶಾಲೆಗೆ ಹೆಚ್ಚಿನ ಮೂಲ ಸೌಕರ್ಯ ಒದಗಿಸಿ ಇಲ್ಲಿ ಪಿಯುಸಿ ಹಾಗೂ ಪದವಿ ತರಗತಿಗಳನ್ನು ಆರಂಭಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು~ ಎಂದು ನುಡಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ. ಮರಿಯಪ್ಪ ಮಾತನಾಡಿ, `ಉತ್ತಮ ಫಲಿತಾಂಶಕ್ಕಾಗಿ ಕಲಿಸುವ ಸಂದರ್ಭಗಳಲ್ಲಿ ಶಿಕ್ಷಕರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ~ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಅನ್ನಪೂರ್ಣ ಕೃಷ್ಣಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ಜಿಲ್ಲೆಯ ಉಪನಿರ್ದೇಶಕ ಟಿ.ಸಿ.ಚಂದ್ರಯ್ಯ, ಬಿಬಿಎಂಪಿ ಸದಸ್ಯೆ ಲಕ್ಷ್ಮೀ ಚಿಕ್ಕೇಗೌಡ ಪಾಲ್ಗೊಂಡಿದ್ದರು.