ಕುಶಾಲನಗರ: ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿತರಚೀಟಿ ನೋಂದಣಿ ಕಾರ್ಯವನ್ನು ಖಾಸಗಿ ಸಂಸ್ಥೆಗೆ ವಹಿಸುವ ಕುರಿತು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಶಿವಾನಂದ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ವಿಶೇಷ ಸಭೆ ನಡೆಯಿತು.
ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಪಡಿತರಚೀಟಿ ಪಡೆಯುವ ಅರ್ಹ ಅರ್ಜಿದಾರರಿದ್ದು, ಇದುವರೆಗೆ 200 ಕುಟುಂಬಗಳಿಗೆ ಮಾತ್ರವೇ ಭಾವಚಿತ್ರ ತೆಗೆಯಲಾಗಿದೆ. ಇದರಿಂದ ಪಡಿತರ ಚೀಟಿಗಾಗಿ ನೋಂದಣಿ ಕಾರ್ಯ ವಿಳಂಬ ಗೊಂಡಿರುವ ಕಾರಣದಿಂದ ಖಾಸಗಿ ಸಂಸ್ಥೆಗೆ ವಹಿಸಲು ಸಭೆಯಲ್ಲಿ ಚರ್ಚಿಸಲಾಯಿತು.
ಭಾವಚಿತ್ರ ತೆಗೆಯಲು ಒಂದು ಕುಟುಂಬಕ್ಕೆ 185 ರೂಪಾಯಿ ವೆಚ್ಚವಾಗುತ್ತಿದ್ದು, ಫಲಾನುಭವಿಗಳು 85 ರೂಪಾಯಿ ಭರಿಸುವಂತೆಯೂ ಉಳಿದ 100 ರೂಪಾಯಿಗಳನ್ನು ಕಾರ್ಯನಿರ್ವಾಹಕ ಅಧಿಕಾರಿಗಳ ಒಪ್ಪಿಗೆ ಪಡೆದು ಪಂಚಾಯಿತಿ ಅನುದಾನದಲ್ಲಿ ನೀಡುವುದಾಗಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಕಮಲಾ, ಪಿಡಿಒ ಮಂಜೂರ್ ಖಾನ್, ಸದಸ್ಯರಾದ ಎಂ.ಎಸ್. ರಾಜೇಶ್, ಪ್ರಸನ್ನ, ಚೆಲುವರಾಜ್ ಇದ್ದರು.