ಬೆಂಗಳೂರು: `ಖಾಸಗಿ ಸಹಭಾಗಿತ್ವದ ಜತೆಗೆ ಸಾರ್ವಜನಿಕರ ಒಲವುಗಳನ್ನು ಪರಿಗಣಿಸಿದಾಗ ಮಾತ್ರ ಮಾರುಕಟ್ಟೆ, ಸರ್ಕಾರ ಹಾಗೂ ಜನರು ಉಳಿಯಲು ಸಾಧ್ಯ~ ಎಂದು ಉದ್ಯಮಿ ಜಯಂತ್ ಸಿನ್ಹಾ ಅಭಿಪ್ರಾಯಪಟ್ಟರು.
ಪೆಂಗ್ವಿನ್ ಬುಕ್ಸ್ ಇಂಡಿಯಾ ಹಾಗೂ ಹೋಟೆಲ್ ತಾಜ್ವೆಸ್ಟ್ ಎಂಡ್ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲೇಖಕಿ ರೋಹಿಣಿ ನೀಲೆಕಣಿ ಅವರ `ಅನ್ ಕಾಮನ್ ಗ್ರೌಂಡ್~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಹರೀಶ್ ಹಂದೆ, `ಸೌರಶಕ್ತಿ ಬಳಕೆಗೆ ಸಂಬಂಧಿಸಿದಂತೆ ಗ್ರಾಮೀಣ ಭಾಗದ ಜನತೆಗೆ ಇನ್ನೂ ಸಬ್ಸಿಡಿಗಳು ದೊರೆಯುತ್ತಿಲ್ಲ. ನೂರಿನ್ನೂರು ರೂಪಾಯಿಗಳಷ್ಟು ವಿದ್ಯುತ್ ಬಿಲ್ ಪಾವತಿ ಮಾಡದ ಅಸಹಾಯಕ ಸ್ಥಿತಿಯಲ್ಲಿ ಗ್ರಾಮೀಣ ಭಾಗದ ಜನರಿದ್ದಾರೆ. ಅಂತಹವರಿಗೆ ಸೌರಶಕ್ತಿ ಯೋಜನೆಗಳು ಲಭಿಸುವಂತಾಗಬೇಕು~ ಎಂದು ಅಭಿಪ್ರಾಯಪಟ್ಟರು.
ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲೇಖಕಿ ರೋಹಿಣಿ, `ಸರ್ಕಾರವನ್ನೇ ಎಲ್ಲದಕ್ಕೂ ಹೊಣೆಯಾಗಿಸುವುದರ ಬದಲು ಜನರು ಕೂಡ ಜಾಗೃತರಾಗಬೇಕಿದೆ. ಮನೆಯ ಸುತ್ತ ಕಸದ ರಾಶಿ ಹರಡಿಕೊಂಡರೆ, ನಿರರ್ಥಕವಾಗಿ ವಿದ್ಯುತ್ ಪೋಲು ಮಾಡುತ್ತಿದ್ದರೆ ಆಡಳಿತ ನಡೆಸುವವರು ಏನೂ ಮಾಡಲು ಸಾಧ್ಯವಿಲ್ಲ. ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡುವ ಸಂಸ್ಕೃತಿ ಮೊದಲು ನಿಲ್ಲಬೇಕು~ ಎಂದರು.