ಹನುಮಸಾಗರ: ವಿರಾಮ ವೇಳೆಯಲ್ಲಿ ಮಕ್ಕಳಿಗೆ ಹೆಚ್ಚಿನ ಜ್ಞಾನಾರ್ಜುನೆ ನೀಡುವುದಕ್ಕಾಗಿ ಆರಂಭಗೊಳ್ಳುವ ಬೇಸಿಗೆ ಶಿಬಿರಗಳು ಮಕ್ಕಳಿಗೆ ಸಂತಸದಾಯಕವಾಗಿರಲಿ ಎಂದು ಸಾಹಿತಿ ರಾಮಚಂದ್ರ ಬಡಿಗೇರ ಹೇಳಿದರು.
ಇಲ್ಲಿನ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಮಕ್ಕಳಿಗಾಗಿ ನಡೆದ ಎಕ್ಸಲೆಂಟ್ ಬೇಸಿಗೆ ಶಿಬಿರ ಉದ್ಘಾಟನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಯಾವುದೇ ಪಠ್ಯ, ಸಮವಸ್ತ್ರದ ಚೌಕಟ್ಟಿಲ್ಲದೆ ಬೋಧನೆ ನಡೆಸುವ ಇಂತಹ ಶಿಬಿರಗಳಿಂದ ಸಾಮಾನ್ಯ ಜ್ಞಾನವೆಲ್ಲ ಮಕ್ಕಳಿಗೆ ಸಿಗುವ ಸಾಧ್ಯತೆ ಇಲ್ಲಿರುತ್ತದೆ. ಮನರಂಜನೆಯೇ ಪ್ರಮುಖ ವಿಷಯವಾಗಿಟ್ಟುಕೊಂಡು ಆ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯೂ ನಡೆದರೆ ಶಿಬಿರ ಅರ್ಥಪೂರ್ಣವೆನಿಸುತ್ತದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಪ್ರಹ್ಲಾದ ಕಟ್ಟಿ ಮಾತನಾಡಿ ಮಕ್ಕಳಿಗೆ ಬಿಡುವು ದೊರೆತ ಈ ದಿನಗಳಲ್ಲಿ ಮತ್ತೆ ಕಲಿಕೆ, ಬರಹ ಎಂದು ಗೋಜಲು ಎನಿಸದಂತೆ ಅವರಿಗೆ ಆಕರ್ಷಕವಾಗಿರಲಿ, ಮಕ್ಕಳಿಗೆ ಶಾಲಾ ಚೌಕಟ್ಟು ಎಂಬ ಕಲ್ಪನೆ ಮೂಡದ ಹಾಗೆ ಕಲಿಕೆ ರಂಜನೆಯಾಗಿರಲಿ ಎಂದು ಹೇಳಿದರು.