ಬೆಂಗಳೂರು: ಭೂಸ್ವಾಧೀನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ `ನೈಸ್~ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ಧ ಭೂಮಾಲೀಕರು ಸಲ್ಲಿಸಿರುವ ದೂರಿನ ವಿಚಾರಣೆಯನ್ನು ಹೊಸದಾಗಿ ನಡೆಸುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ, ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಖೇಣಿ ವಿರುದ್ಧ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ತಿಳಿಸಿ ಪೊಲೀಸರು ದಾಖಲು ಮಾಡಿರುವ `ಬಿ-ವರದಿ~ ಪ್ರಶ್ನಿಸಿ ಎಸ್.ಆರ್.ಗಂಗಾಧರ ಹಾಗೂ ಇತರ ಭೂಮಾಲೀಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶ ಹೊರಡಿಸಿದೆ.
`ಸೋಮಪುರದಲ್ಲಿ ನಮಗೆ ಸೇರಿರುವ ಜಮೀನನ್ನು ನೈಸ್ ಸಂಸ್ಥೆಯು `ಫಿಲ್ಮ್ ಸಿಟಿ~ ನಿರ್ಮಾಣಕ್ಕೆ ಸ್ವಾಧೀನಕ್ಕೆ ಮುಂದಾಗಿತ್ತು. ಇದನ್ನು ಬಿಡಲು ನಾವು ಒಪ್ಪಿರಲಿಲ್ಲ. ಆದ್ದರಿಂದ ಖೇಣಿ ಅವರು ತಮ್ಮ ಬೆಂಬಲಿಗರ ಜೊತೆಗೆ ಬಂದು ಕೊಲೆ ಬೆದರಿಕೆ ಹಾಕಿದ್ದಾರೆ. ಈ ಜಮೀನು ಸ್ವತಃ ಬಿಟ್ಟು ಕೊಟ್ಟಿದ್ದೇವೆ ಎಂಬ ಬಗ್ಗೆ ಪೊಲಿಸರು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ~ ಎನ್ನುವುದು ದೂರಾಗಿತ್ತು.