ಮುಂಬೈ (ಪಿಟಿಐ): ದಂತಕತೆಯಾಗಿದ್ದ ಖ್ಯಾತ ನಟ ಪ್ರಾಣ್ ಅವರ ಅಂತ್ಯಕ್ರಿಯೆಯು ಶನಿವಾರ ಇಲ್ಲಿನ ಶಿವಾಜಿ ಪಾರ್ಕ್ ವಿದ್ಯುತ್ ಚಿತಾಗಾರದಲ್ಲಿ ಅವರು ಕುಟುಂಬ ಸದಸ್ಯರು ಮತ್ತು ಹಿಂದಿ ಚಿತ್ರರಂಗದ ಸದಸ್ಯರ ಸಮ್ಮುಖದಲ್ಲಿ ನೆರವೇರಿತು. ನಿಧನ ಕಾಲಕ್ಕೆ ಅವರಿಗೆ 93 ವರ್ಷ ವಯಸ್ಸಾಗಿತ್ತು.
ಬಾಲಿವುಡ್ ನಲ್ಲಿ ಖಳ ನಾಯಕರಾಗಿ ಖ್ಯಾತರಾದ ಪ್ರಾಣ್ ಶುಕ್ರವಾರ ರಾತ್ರಿ ಇಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ದೀರ್ಘಕಾಲದ ಅಸ್ವಸ್ಥತೆ ಬಳಿಕ ನಿಧನರಾಗಿದ್ದರು.
ಹೂವುಗಳಿಂದ ಮುಚ್ಚಿದ್ದ ಪ್ರಾಣ್ ಅವರ ಪಾರ್ಥಿವ ಶರೀರವನ್ನು ಭಾರಿ ಮಳೆಯ ನಡುವೆಯೇ ದಾದರ್ ಪಶ್ಚಿಮದಲ್ಲಿ ಇರುವ ವಿದ್ಯುತ್ ಚಿತಾಗಾರಕ್ಕೆ ಶನಿವಾರ ಬೆಳಗ್ಗೆ ತರಲಾಯಿತು. ಅಂತ್ಯಕ್ರಿಯೆಗೆ ಬಂದವರ ಸಂಖ್ಯೆ ಕಡಿಮೆ ಇದ್ದರೂ ಚಿತಾಗಾರ ಆಸುಪಾಸಿನಲ್ಲಿ ಭಾರಿ ಬಂದೋಬಸ್ತ್ ವ್ವವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12.30ಕ್ಕೆ ಅಂತ್ಯಕ್ರಿಯೆ ವಿಧಿಗಳನ್ನು ನೆರವೇರಿಸಲಾಯಿತು.
ಖ್ಯಾತ ಬರಹಗಾರ ಗುಲ್ಜಾರ್, ಕರಣ್ ಜೋಹರ್, ಶಕ್ತಿ ಕಪೂರ್, ಶತ್ರುಘ್ನ ಸಿನ್ಹ, ಅನುಪಮ್ ಖೇರ್, ಡ್ಯಾನ್ನಿ ಡೆಂಝೊಂಗ್ಪಾ, ರಾಜ್ ಬಬ್ಬರ್, ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಲೇಖಕ ಸಲೀಂ ಖಾನ್ ಮತ್ತಿತರರು ಹಾಜರಿದ್ದು ಅಂತಿಮ ಗೌರವ ಸಲ್ಲಿಸಿದರು.