ಗಂಗಾವತಿ: ಗಂಗಾವತಿ ಮತಕ್ಷೇತ್ರ ವ್ಯಾಪ್ತಿಯ ಹಂಪಸದುರ್ಗಾ, ಆಗೋಲಿ, ವಿಠಲಾಪುರ, ಬಂಡ್ರಾಳ, ವೆಂಕಟಗಿರಿ, ಗಡ್ಡಿ, ಉಡುಮಕಲ್, ಲಿಂಗದಳ್ಳಿ, ಮುಕ್ಕುಂಪಿ, ಹೇಮಗುಡ್ಡ, ಎಚ್.ಆರ್.ಜಿ ನಗರ ಸೇರಿದಂತೆ ವಿವಿಧೆಡೆ ಭಾನುವಾರ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಬಿರುಸಿನ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ, `ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರ ರೈತ, ಕಾರ್ಮಿಕ, ದಲಿತ, ಬಡವ, ಅಲ್ಪಸಂಖ್ಯಾತ, ವಿದ್ಯಾರ್ಥಿ ಹೀಗೆ ನಾನಾ ವರ್ಗದ ಏಳ್ಗೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.
ಇದೇ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ನೂರಾರು ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಮೂಲಕ ಜನರ ಜೀವನಮಟ್ಟ ಸುಧಾರಿಸಲು ಯತ್ನಿಸಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಕ್ಷೇತ್ರದ ಜನ ಶಾಂತಿ-ಸೌಹಾರ್ದತೆಯಿಂದ ಬದುಕಿದ್ದಾರೆ.
ಕ್ಷೇತ್ರದ ಜನತೆಯ ನೆಮ್ಮದಿ ಜೀವನ ಮತ್ತು ಅಭಿವೃದ್ಧಿ ಮುಂದುವರೆಸಿಕೊಂಡು ಹೋಗಲು ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವ ಮೂಲಕ ಮತ್ತೊಮ್ಮೆ ಅವಕಾಶ ಮಾಡಿ ಕೊಡಿ' ಎಂದು ಪರಣ್ಣ ಮತದಾರರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಪ್ರಮುಖರಾದ ಆಗೋಲಿ ದುರ್ಗಪ್ಪ, ಸಿದ್ದಪ್ಪ ಬಾಳೆಕಾಯಿ, ವಿರುಪಣ್ಣ ಡಂಬರ, ಆರ್ಹಾಳ ಚನ್ನವೀರನಗೌಡ ಕೋರಿ, ವಡ್ಡರಹಟ್ಟಿಯ ಶಿವಪ್ಪ ಹತ್ತಿಮರದ, ಅಮರೇಗೌಡ ಪೊಲೀಸ್ ಪಾಟೀಲ್, ಜಟ್ಟಿ ವೀರಪ್ರಸಾದ ಇತರರಿದ್ದರು.