ಗಂಗಾವಳಿ ನದಿಯು ಅತ್ಯಂತ ಸೂಕ್ಷ್ಮ ಜಲಚರಗಳ ತಾಣವಾಗಿದ್ದು, ಈ ಹಿಂದೆ ಇಲ್ಲಿ ಹೇರಳವಾಗಿ ಕಪ್ಪೆಚಿಪ್ಪು ದೊರೆಯುತ್ತಿತ್ತು. ಆದರೆ ಈ ಮರಳು ಗಣಿಗಾರಿಕೆಯಿಂದಾಗಿ ಜಲಚರಗಳು ನಾಶವಾಗುವುದರ ಜೊತೆಗೆ ಕಪ್ಪೆ-ಚಿಪ್ಪು ಕೂಡ ದೊರೆಯದಂತಾಗಿದೆ. ನದಿಯ ಅಕ್ಕ ಪಕ್ಕದಲ್ಲಿ ಕಾಂಡ್ಲಾ ಗಿಡಗಳು ಬೆಳೆದು ಜಲಚರಗಳಿಗೆ ಆಶ್ರಯವನ್ನು ನೀಡುವುದರ ಜೊತೆಗೆ ಅವುಗಳ ಸಂತಾನೋತ್ಪತ್ತಿಗೆ ಪೂರಕವಾಗಿತ್ತು. ಆದರೆ ಅದೂ ಕೂಡ ಇಂದು ನಾಶವಾಗುವತ್ತ ಸಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಷರತ್ತಿನಂತೆ `ಸಂಪೂರ್ಣವಾಗಿ ಮಾನವ ಶ್ರಮದಿಂದ ಸಾಂಪ್ರದಾಯಿಕವಾಗಿ ಮರಳನ್ನು ತೆಗೆಯಬೇಕು. ಯಾವುದೇ ಯಂತ್ರೋಪಕರಣಗಳನ್ನು ಬಳಸುವಂತಿಲ್ಲ. ನದಿಯ ತಳದಿಂದ ಕೇವಲ ಅರ್ಧ ಮೀಟರ್ ಆಳದವರೆಗೆ ಮಾತ್ರ ಮರಳನ್ನು ತೆಗೆಯಬೇಕು'. ಆದರೆ ಇಲ್ಲಿ ಇಲಾಖೆಯ ಎಲ್ಲಾ ಷರತ್ತುಗಳು ಉಲ್ಲಂಘನೆಯಾಗಿ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಮರಳು ತೆಗೆಯಲು ಯಾಂತ್ರೀಕೃತ ದೋಣಿಯನ್ನು ಬಳಸಿದರೆ, ಅದನ್ನು ಮೇಲೆತ್ತಲು ಕ್ರೇನ್ ಉಪಯೋಗಿಸಲಾಗುತ್ತಿದೆ.