ಉಡುಪಿ: `ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಭಾರತ ತಂಡದ ಕೋಚ್ ಆಗುವುದಾದರೆ ಅವರನ್ನು ಬೆಂಬಲಿಸುತ್ತೇನೆ. ನನ್ನ ಎರಡನೇ ಆಯ್ಕೆ ಅನಿಲ್ ಕುಂಬ್ಳೆ' ಎಂದು ಭಾರತ ತಂಡದ ಸ್ಪಿನ್ನರ್ ಕ್ರಿಕೆಟ್ ಆಟಗಾರ ಹರಭಜನ್ ಸಿಂಗ್ ಹೇಳಿದರು.
ಕುಂದಾಪುರ ತಾಲ್ಲೂಕಿನ ಶಿರೂರಿನ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ನಲ್ಲಿ ಶುಕ್ರವಾರ ವಾರ್ಷಿಕೋತ್ಸವ ಸಮಾರಂಭ ಮತ್ತು ಶಾಲೆಯ ಈಜುಕೊಳದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
`ಮ್ಯಾಚ್ ಫಿಕ್ಸಿಂಗ್ ಹಗರಣಗಳು ಬೆಳಕಿಗೆ ಬಂದ ಸಂದರ್ಭದಲ್ಲೂ ಸೌರವ್ ಗಂಗೂಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದರು' ಎಂದು ಹರಭಜನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯುವ ಆಫ್ ಸ್ಪಿನ್ನರ್ಗಳು ತಂಡಕ್ಕೆ ಸೇರ್ಪಡೆಗೊಂಡು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮ್ಮ ಸ್ಥಾನಕ್ಕೆ ಕುತ್ತು ಬರುವ ಸಂಭವ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಹೊಸಬರು ತಂಡಕ್ಕೆ ಬರುತ್ತಿದ್ದಾರೆ ನಿಜ, ನಾನೂ ಸಹ ಕಠಿಣ ಪರಿಶ್ರಮ ಹಾಕಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ಇಲ್ಲಿ ಯಾವುದೂ ಶಾಶ್ವತ ಅಲ್ಲ. ಆದರೆ, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸ ಇದೆ. ನನ್ನ ಅನುಭವ ಬಳಸಿ ಒಳ್ಳೆಯ ಪ್ರದರ್ಶನ ನೀಡುತ್ತೇನೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.