ಮೈಸೂರು: ಶುಕ್ರವಾರ ಬೆಳಿಗ್ಗೆಯಿಂದಲೇ ಕಾಲೇಜು ಹುಡುಗರು ಗಂಗೋತ್ರಿ ಗ್ಲೇಡ್ಸ್ನ ಹಾದಿ ಹಿಡಿದಿದ್ದರು.
ಶನಿವಾರದಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯ `ಬಿ' ಗುಂಪಿನ ಆರನೇ ಪಂದ್ಯ ಆಡಲು ಆಗಮಿಸಿರುವ ಕರ್ನಾಟಕ ಮತ್ತು ವಿದರ್ಭ ತಂಡಗಳ ಆಟಗಾರರನ್ನು ನೋಡಲು ವಿದ್ಯಾರ್ಥಿಗಳ ದಂಡು ಬರುತ್ತಿತ್ತು.
ಅದರಲ್ಲೂ ಐಪಿಎಲ್ ಹೀರೊ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಆರ್. ವಿನಯಕುಮಾರ್, ಪಕ್ಕದ ಮಂಡ್ಯದ ಹುಡುಗ ಎಚ್.ಎನ್. ಶರತ್ ಅವರ ಹಸ್ತಾಕ್ಷರ ಪಡೆಯಲು ಹುಡುಗರು ಓಡಾಡುತ್ತಿದ್ದರು. ಒಂದೊಮ್ಮೆ ಭಾರತ ತಂಡವನ್ನು ಪ್ರತಿನಿಧಿಸಿದ್ದ, ಸದ್ಯ ವಿದರ್ಭ ತಂಡದಲ್ಲಿರುವ ಹೇಮಂಗ್ ಬದಾನಿ ಮತ್ತು ಶಿವಸುಂದರದಾಸ್ ಅವರ ಆಟೋಗ್ರಾಫ್ಗೂ ನುಗ್ಗಿದರು. ಹೊಸ ಪೆವಿಲಿಯನ್ನ ಕೋಣೆಗಳ ಮುಂದೆ ಗುಂಪು, ಗುಂಪಾಗಿ ನಿಂತ ಯುವಕರನ್ನು ನಿಯಂತ್ರಿಸುವುದೇ ಸಂಘಟಕರಿಗೆ ಸವಾಲಾಗಿತ್ತು. ಕೆಎಸ್ಸಿಎ ಅಕಾಡೆಮಿಯ ನೆಟ್ಸ್ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಅಭ್ಯಾಸ ಮುಗಿಸಿ, ಫೀಲ್ಡಿಂಗ್ ಅಭ್ಯಾಸಕ್ಕಾಗಿ ಮೈದಾನಕ್ಕೆ ಬರುತ್ತಿದ್ದ ಆಟಗಾರರ ಕೈಕುಲುಕಲು, ಮಾತನಾಡಿಸಲು ವಿದ್ಯಾರ್ಥಿಗಳು ಮುಗಿಬಿದ್ದಿದ್ದರು. ಮೊಬೈಲ್ ಫೋನ್, ಕ್ಯಾಮೆರಾ ಮತ್ತು ಟ್ಯಾಬ್ಲೆಟ್ಗಳಲ್ಲಿ ತಮ್ಮ ನೆಚ್ಚಿನ ಆಟಗಾರರ ಚಿತ್ರ ಸೆರೆಹಿಡಿಯುವ ಪೈಪೋಟಿಯನ್ನೂ ನಡೆಸಿದ್ದರು.