ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡನ ಕೊಲೆಗೆ ಸುಪಾರಿ!

Last Updated 14 ಸೆಪ್ಟೆಂಬರ್ 2013, 10:37 IST
ಅಕ್ಷರ ಗಾತ್ರ

ಮಹಾಲಿಂಗಪುರ: ಮೂರು ವರ್ಷಗಳ ಹಿಂದೆ ಮುಗಳಖೋಡದಲ್ಲಿ ದಾಖ­ಲಾಗಿದ್ದ ವ್ಯಕ್ತಿಯೊಬ್ಬ ಕಾಣೆಯಾದ ಪ್ರಕರಣವನ್ನು ಇಲ್ಲಿಯ ಪೊಲೀಸರು ಭೇದಿಸಿರುವಲ್ಲಿ ಯಶಸ್ವಿಯಾಗಿದ್ದಾರೆ. ಹೆಂಡತಿಯೇ ಸುಪಾರಿ ಕೊಟ್ಟು ಗಂಡನನ್ನು ಕೊಲೆ ಮಾಡಿಸಿ ಗೋವಾ ಸಮೀಪದ ದೂಧಸಾಗರ ಜಲಪಾತದ ಕಣಿವೆಯಲ್ಲಿ ಶವವನ್ನು ಎಸೆದ ಪ್ರಸಂಗ ಬೆಳಕಿಗೆ ಬಂದಿದೆ.

ಮುಗಳಖೋಡ ಗ್ರಾಮದ ಸಿದ್ದಪ್ಪ ಕರವಳ್ಳಿ ಕೊಲೆಯಾದ ವ್ಯಕ್ತಿ. ಪ್ರಕರಣದ ಪ್ರಮುಖ ಆರೋಪಿ­ಗಳಾದ ಸರಸ್ವತಿ ಕರವಳ್ಳಿ, ಆಕೆಯ ಪ್ರಿಯಕರ ಬಾಲಚಂದ್ರ ದಳವಾಯಿ, ಕೊಲೆಯಾದ ಸಿದ್ದಪ್ಪನ ಗೆಳೆಯ ಪರಮಾನಂದ ಹುಂಡೇಕಾರ ಅವ­ರನ್ನು ಪಿಎಸ್‌ಐ ಎಚ್.ಆರ್. ಪಾಟೀಲ ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎಸ್ಪಿ ಈಶ್ವರ­ಚಂದ್ರ ವಿದ್ಯಾಸಾಗರ ಸುದ್ದಿಗೋಷ್ಠಿ­ಯಲ್ಲಿ ಮಾತನಾಡಿ, ಮೂರು ವರ್ಷಗಳ ತನಿಖೆಯಿಂದ ಯಾವುದೇ ಮಾಹಿತಿ ದೊರೆಯದ ಕಾರಣ ಪ್ರಕರಣ ಜನ ಮಾನಸದಿಂದ ಮರೆತು ಹೋಗಿತ್ತು. ಮೃತನ ಸಹೋದರ ಗೋಪಾಲ ಕರವಳ್ಳಿ ಕೊಲೆ ಆರೋಪಿಗಳ ತನಿಖೆ ನಡೆಸ­ಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದರು. ಗೋಪಾಲ ನೀಡಿದ ಮಾಹಿತಿಯನ್ವಯ, ಕೊಲೆಯಾದ ಸಿದ್ದಪ್ಪನ ಜೊತೆಗೆ ಕೆಲಸಕ್ಕೆ ತೆರಳಿದ್ದ, ಹಾಲಿ ಗೋಕಾಕ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ವಾಸವಾಗಿ­ರುವ ಪರಮಾನಂದ ಹುಂಡೇಕಾರ ಅವರ ವಿಚಾರಣೆ ನಡೆಸಬೇಕು ಎಂದು ತಿಳಿಸಿದ್ದರು. ಇದು ಪ್ರಕರಣವನ್ನು ಭೇದಿಸಲು ಸಹಕಾರಿಯಾಯಿತು ಎಂದು ವಿವರಿಸಿದರು.

ಕ್ಲಿಷ್ಟಕರ ಪ್ರಕರಣ ಭೇದಿಸು­ವಲ್ಲಿ ಮಹಾಲಿಂಗಪುರ ಪಿಎಸ್‌ಐ ಎಚ್. ಆರ್. ಪಾಟೀಲ ಮತ್ತು ಸಿಬ್ಬಂದಿ ಶ್ರಮ­ವಹಿಸಿದ್ದಾರೆ.  ಜಮಖಂಡಿ ಡಿವೈ­ಎಸ್ಪಿ ಬಸನಗೌಡ ಹುಲ್ಸಗುಂದ, ಸಿಪಿಐ ಎಚ್.ಡಿ. ಮುದರೆಡ್ಡಿ ಮಾರ್ಗ­ದರ್ಶನ ನೀಡಿದ್ದಾರೆ. ಎಸ್.ಬಿ. ಮುಳ್ಳೂರ, ಸುರೇಶ ನಾಯಕ, ಕೆ.ಎನ್. ಬುದ್ನಿ, ವಿ.ಬಿ. ತೇಲಿ, ಎಂ.ಡಿ. ಸವದಿ, ಜಗದೀಶ ಕಾಂತಿ, ಬಿ.ಆರ್. ಜಗಲಿ, ಎಸ್.ಎಸ್. ತುಪ್ಪದ, ಪ್ರಕಾಶ ಎತ್ತಿನಮನಿ, ಎಲ್.ವಿ. ಹೊಸೂರ, ವಿ.ಎಸ್. ಅಜ್ಜನಗೌಡರ, ರಫೀಕ್‌ ಲಟ್ಟಣ್ಣವರ ನೆರವಾಗಿದ್ದಾರೆ. ಅವರಿಗೆ ಸೂಕ್ತ ಬಹುಮಾನ ನೀಡಲಾಗು­ವುದು ಎಂದು ಹೇಳಿದರು.

ಆರೋಪಿ ಸರಸ್ವತಿ ತನ್ನ ಪ್ರಿಯಕರ ಬಾಲಚಂದ್ರ ದಳವಾಯಿ ಜೊತೆ­ಗೂಡಿ ಪತಿ ಸಿದ್ದಪ್ಪನ ಕೊಲೆ ಸಂಚು ರೂಪಿಸಿದ್ದರು. ಅದಕ್ಕಾಗಿ ₨ 85 ಸಾವಿರಕ್ಕೆ ರಬಕವಿಯ (ಸದ್ಯ ಮುಧೋಳ ವಾಸಿ) ಸದಾಶಿವ ಬಕರೆ, ಜಾಫರ್‌ ಹುಸೇನಸಾಬ್‌ ಗದ್ಯಾಳ (ಮುಗಳಖೋಡ ವಾಸಿ), ಹನ­ಮಂತ/ ಉಮೇಶ ಉತ್ಲಾಸರ (ಬಾಗಲ­ಕೋಟೆ ವಾಸಿ ) ಹಾಗೂ ಮುಚಖಂಡಿಯ ಸಂತೋಷ ರಾಠೋಡ ಅವರಿಗೆ ಸುಪಾರಿ ನೀಡಿ­ದ್ದರು. ಆವರೆಲ್ಲ ಸೇರಿ ಸಿದ್ದಪ್ಪ­ನನ್ನು ಕಾರಿನಲ್ಲಿ ಗೋವಾಕ್ಕೆ ಕರೆದೊಯ್ದು ಮಾರ್ಗ ಮಧ್ಯದಲ್ಲಿ ಕೊಲೆ ಮಾಡಿ­ದ್ದಾರೆ ಎಂದು ಘಟನೆಯ ವಿವರ ನೀಡಿದರು.

ಘಟನೆಯ ಹಿನ್ನೆಲೆ: 2011ರ ಜುಲೈ 13ರಂದು ಆರೋಪಿ ಸರಸ್ವತಿ ಕರವಳ್ಳಿಯು ತನ್ನ ಪತಿ ಸಿದ್ದಪ್ಪ 2010ರ ಆಗಸ್ಟ್‌ 20ರ ಬೆಳಿಗ್ಗೆ 8 ಗಂಟೆಯಿಂದ ಕಾಣೆಯಾಗಿದ್ದಾನೆ. ತನ್ನ ಗಂಡ, ಆತನ ಸ್ನೇಹಿತ ಪರಮಾ­ನಂದ ಹುಂಡೇಕಾರ ಜೊತೆಗೆ ಗೋವಾಕ್ಕೆ ಹೋಗುವುದಾಗಿ ತಿಳಿಸಿ­ದ್ದನು ಎಂದು ದೂರು ದಾಖಲಿ­ಸಿದ್ದಳು. ಪೊಲೀಸರು ತನಿಖೆ ನಡೆಸಿ­ದ್ದರೂ ಪ್ರಯೋಜನ ಆಗಿರಲಿಲ್ಲ. ಪ್ರಕರಣ ಅಂತ್ಯ ಕಂಡಿತು ಎನ್ನುವಾಗ ಸಿಕ್ಕ ಸಣ್ಣ ಸುಳಿವು ಆಧರಿಸಿ ಪರಮಾ­ನಂದ ಅವರನ್ನು ವಿಚಾರಣೆ ನಡೆಸಿ­ದಾಗ ಆರೋಪಿ ಸರಸ್ವತಿ ತನ್ನ ಪ್ರಿಯ­ಕರ ಬಾಲಚಂದ್ರ ಜೊತೆಗೂಡಿ ತನ್ನ ಗಂಡನ ಕೊಲೆ ಮಾಡಿದ್ದಾಳೆ ಎಂದು ಹೇಳಿದರು. ಅದರ ಹಿನ್ನೆಲೆ­ಯಲ್ಲಿ ಆರೋಪಿಗಳನ್ನು ಬಂಧಿಸ­ಲಾಗಿದೆ ಎಂದು ಎಸ್ಪಿ ಈಶ್ವರಚಂದ್ರ ವಿದ್ಯಾಸಾಗರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT