ಮಹಾಲಿಂಗಪುರ: ಮೂರು ವರ್ಷಗಳ ಹಿಂದೆ ಮುಗಳಖೋಡದಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬ ಕಾಣೆಯಾದ ಪ್ರಕರಣವನ್ನು ಇಲ್ಲಿಯ ಪೊಲೀಸರು ಭೇದಿಸಿರುವಲ್ಲಿ ಯಶಸ್ವಿಯಾಗಿದ್ದಾರೆ. ಹೆಂಡತಿಯೇ ಸುಪಾರಿ ಕೊಟ್ಟು ಗಂಡನನ್ನು ಕೊಲೆ ಮಾಡಿಸಿ ಗೋವಾ ಸಮೀಪದ ದೂಧಸಾಗರ ಜಲಪಾತದ ಕಣಿವೆಯಲ್ಲಿ ಶವವನ್ನು ಎಸೆದ ಪ್ರಸಂಗ ಬೆಳಕಿಗೆ ಬಂದಿದೆ.
ಮುಗಳಖೋಡ ಗ್ರಾಮದ ಸಿದ್ದಪ್ಪ ಕರವಳ್ಳಿ ಕೊಲೆಯಾದ ವ್ಯಕ್ತಿ. ಪ್ರಕರಣದ ಪ್ರಮುಖ ಆರೋಪಿಗಳಾದ ಸರಸ್ವತಿ ಕರವಳ್ಳಿ, ಆಕೆಯ ಪ್ರಿಯಕರ ಬಾಲಚಂದ್ರ ದಳವಾಯಿ, ಕೊಲೆಯಾದ ಸಿದ್ದಪ್ಪನ ಗೆಳೆಯ ಪರಮಾನಂದ ಹುಂಡೇಕಾರ ಅವರನ್ನು ಪಿಎಸ್ಐ ಎಚ್.ಆರ್. ಪಾಟೀಲ ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಸ್ಪಿ ಈಶ್ವರಚಂದ್ರ ವಿದ್ಯಾಸಾಗರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ವರ್ಷಗಳ ತನಿಖೆಯಿಂದ ಯಾವುದೇ ಮಾಹಿತಿ ದೊರೆಯದ ಕಾರಣ ಪ್ರಕರಣ ಜನ ಮಾನಸದಿಂದ ಮರೆತು ಹೋಗಿತ್ತು. ಮೃತನ ಸಹೋದರ ಗೋಪಾಲ ಕರವಳ್ಳಿ ಕೊಲೆ ಆರೋಪಿಗಳ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದರು. ಗೋಪಾಲ ನೀಡಿದ ಮಾಹಿತಿಯನ್ವಯ, ಕೊಲೆಯಾದ ಸಿದ್ದಪ್ಪನ ಜೊತೆಗೆ ಕೆಲಸಕ್ಕೆ ತೆರಳಿದ್ದ, ಹಾಲಿ ಗೋಕಾಕ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ವಾಸವಾಗಿರುವ ಪರಮಾನಂದ ಹುಂಡೇಕಾರ ಅವರ ವಿಚಾರಣೆ ನಡೆಸಬೇಕು ಎಂದು ತಿಳಿಸಿದ್ದರು. ಇದು ಪ್ರಕರಣವನ್ನು ಭೇದಿಸಲು ಸಹಕಾರಿಯಾಯಿತು ಎಂದು ವಿವರಿಸಿದರು.
ಕ್ಲಿಷ್ಟಕರ ಪ್ರಕರಣ ಭೇದಿಸುವಲ್ಲಿ ಮಹಾಲಿಂಗಪುರ ಪಿಎಸ್ಐ ಎಚ್. ಆರ್. ಪಾಟೀಲ ಮತ್ತು ಸಿಬ್ಬಂದಿ ಶ್ರಮವಹಿಸಿದ್ದಾರೆ. ಜಮಖಂಡಿ ಡಿವೈಎಸ್ಪಿ ಬಸನಗೌಡ ಹುಲ್ಸಗುಂದ, ಸಿಪಿಐ ಎಚ್.ಡಿ. ಮುದರೆಡ್ಡಿ ಮಾರ್ಗದರ್ಶನ ನೀಡಿದ್ದಾರೆ. ಎಸ್.ಬಿ. ಮುಳ್ಳೂರ, ಸುರೇಶ ನಾಯಕ, ಕೆ.ಎನ್. ಬುದ್ನಿ, ವಿ.ಬಿ. ತೇಲಿ, ಎಂ.ಡಿ. ಸವದಿ, ಜಗದೀಶ ಕಾಂತಿ, ಬಿ.ಆರ್. ಜಗಲಿ, ಎಸ್.ಎಸ್. ತುಪ್ಪದ, ಪ್ರಕಾಶ ಎತ್ತಿನಮನಿ, ಎಲ್.ವಿ. ಹೊಸೂರ, ವಿ.ಎಸ್. ಅಜ್ಜನಗೌಡರ, ರಫೀಕ್ ಲಟ್ಟಣ್ಣವರ ನೆರವಾಗಿದ್ದಾರೆ. ಅವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಆರೋಪಿ ಸರಸ್ವತಿ ತನ್ನ ಪ್ರಿಯಕರ ಬಾಲಚಂದ್ರ ದಳವಾಯಿ ಜೊತೆಗೂಡಿ ಪತಿ ಸಿದ್ದಪ್ಪನ ಕೊಲೆ ಸಂಚು ರೂಪಿಸಿದ್ದರು. ಅದಕ್ಕಾಗಿ ₨ 85 ಸಾವಿರಕ್ಕೆ ರಬಕವಿಯ (ಸದ್ಯ ಮುಧೋಳ ವಾಸಿ) ಸದಾಶಿವ ಬಕರೆ, ಜಾಫರ್ ಹುಸೇನಸಾಬ್ ಗದ್ಯಾಳ (ಮುಗಳಖೋಡ ವಾಸಿ), ಹನಮಂತ/ ಉಮೇಶ ಉತ್ಲಾಸರ (ಬಾಗಲಕೋಟೆ ವಾಸಿ ) ಹಾಗೂ ಮುಚಖಂಡಿಯ ಸಂತೋಷ ರಾಠೋಡ ಅವರಿಗೆ ಸುಪಾರಿ ನೀಡಿದ್ದರು. ಆವರೆಲ್ಲ ಸೇರಿ ಸಿದ್ದಪ್ಪನನ್ನು ಕಾರಿನಲ್ಲಿ ಗೋವಾಕ್ಕೆ ಕರೆದೊಯ್ದು ಮಾರ್ಗ ಮಧ್ಯದಲ್ಲಿ ಕೊಲೆ ಮಾಡಿದ್ದಾರೆ ಎಂದು ಘಟನೆಯ ವಿವರ ನೀಡಿದರು.
ಘಟನೆಯ ಹಿನ್ನೆಲೆ: 2011ರ ಜುಲೈ 13ರಂದು ಆರೋಪಿ ಸರಸ್ವತಿ ಕರವಳ್ಳಿಯು ತನ್ನ ಪತಿ ಸಿದ್ದಪ್ಪ 2010ರ ಆಗಸ್ಟ್ 20ರ ಬೆಳಿಗ್ಗೆ 8 ಗಂಟೆಯಿಂದ ಕಾಣೆಯಾಗಿದ್ದಾನೆ. ತನ್ನ ಗಂಡ, ಆತನ ಸ್ನೇಹಿತ ಪರಮಾನಂದ ಹುಂಡೇಕಾರ ಜೊತೆಗೆ ಗೋವಾಕ್ಕೆ ಹೋಗುವುದಾಗಿ ತಿಳಿಸಿದ್ದನು ಎಂದು ದೂರು ದಾಖಲಿಸಿದ್ದಳು. ಪೊಲೀಸರು ತನಿಖೆ ನಡೆಸಿದ್ದರೂ ಪ್ರಯೋಜನ ಆಗಿರಲಿಲ್ಲ. ಪ್ರಕರಣ ಅಂತ್ಯ ಕಂಡಿತು ಎನ್ನುವಾಗ ಸಿಕ್ಕ ಸಣ್ಣ ಸುಳಿವು ಆಧರಿಸಿ ಪರಮಾನಂದ ಅವರನ್ನು ವಿಚಾರಣೆ ನಡೆಸಿದಾಗ ಆರೋಪಿ ಸರಸ್ವತಿ ತನ್ನ ಪ್ರಿಯಕರ ಬಾಲಚಂದ್ರ ಜೊತೆಗೂಡಿ ತನ್ನ ಗಂಡನ ಕೊಲೆ ಮಾಡಿದ್ದಾಳೆ ಎಂದು ಹೇಳಿದರು. ಅದರ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಈಶ್ವರಚಂದ್ರ ವಿದ್ಯಾಸಾಗರ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.