ಬೆಂಗಳೂರು: ಅನೈತಿಕ ಸಂಬಂಧದ ಕಾರಣದಿಂದ ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಹಾಗೂ ಆತನ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಕನಕಪುರ ಮುಖ್ಯರಸ್ತೆಯ ಗುಬ್ಬಲಾಳದ ನಿವಾಸಿ ಪ್ರಮಿಳಾ (28) ಮತ್ತು ಆಕೆಯ ಪ್ರಿಯಕರ ಸತೀಶ್ (26) ಬಂಧಿತರು. ಆರೋಪಿಗಳು ಆ. 28 ರಂದು ಆಟೊ ಚಾಲಕ ಅರುಣ್ ಎಂಬಾತನನ್ನು ಕೊಲೆ ಮಾಡಿದ್ದರು.
ಅರುಣ್ ಮತ್ತು ಪ್ರಮಿಳಾ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಎರಡೂವರೆ ವರ್ಷದ ಹೆಣ್ಣು ಮಗುವಿನೊಂದಿಗೆ ಅವರು ಮೈಕೊ ಲೇಔಟ್ನ ಎನ್.ಎಸ್.ಪಾಳ್ಯದಲ್ಲಿ ವಾಸವಿದ್ದರು. ಈ ಮಧ್ಯೆ ಪ್ರಮಿಳಾ, ಅರುಣ್ ಸ್ನೇಹಿತ ಸತೀಶ್ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ವಿಷಯ ತಿಳಿದ ಅರುಣ್ ಮೂರು ತಿಂಗಳ ಹಿಂದೆ ಪತ್ನಿಯೊಂದಿಗೆ ಜಗಳವಾಡಿದ್ದ. ಈ ವೇಳೆ ಪ್ರಮಿಳಾ ಮಗುವಿನೊಂದಿಗೆ ಮನೆ ಬಿಟ್ಟುಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಬಿಟ್ಟುಹೋದ ಪ್ರಮಿಳಾ ಸತೀಶ್ ಜತೆಗೆ ತನ್ನ ಸಂಬಂಧ ಮುಂದುವರಿಸಿದ್ದಳು. ಇದರಿಂದ ಕೋಪಗೊಂಡಿದ್ದ ಅರುಣ್ ಇತ್ತೀಚೆಗೆ ಆಕೆಯ ಮನೆಯ ಬಳಿ ಹೋಗಿ ಜಗಳ ಮಾಡಿದ್ದ. ಇದರಿಂದ ಕೋಪಗೊಂಡಿದ್ದ ಪ್ರಮಿಳಾ ಮತ್ತು ಸತೀಶ್, ಅರುಣ್ ಕೊಲೆಗೆ ಸಂಚು ರೂಪಿಸಿದ್ದರು. ಆ.28ರಂದು ರಾತ್ರಿ ಅರುಣ್ ಮೊಬೈಲ್ಗೆ ಕರೆ ಮಾಡಿ, ಆತನನ್ನು ಜೆ.ಪಿ.ನಗರ 5ನೇ ಹಂತದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದ ಆರೋಪಿಗಳು, ಆತನಿಗೆ ಚಾಕುವಿನಿಂದ ಇರಿದು ನಂತರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು ಎಂದು ಪೊಲೀಸರರು ಮಾಹಿತಿ ನೀಡಿದ್ದಾರೆ.
ಕೊಲೆಯ ನಂತರ ಆರೋಪಿಗಳು ಕೊಳ್ಳೇಗಾಲದಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು ಎಂದು ಜೆ.ಪಿ.ನಗರ ಪೊಲೀಸರು ತಿಳಿಸಿದ್ದಾರೆ.