ನವದೆಹಲಿ: ಸಂಸತ್ ಭವನದ ಬಳಿ ಗುರುವಾರ ಆತ್ಮಾಹುತಿಗೆ ಯತ್ನಿಸಿದ ಹುತಾತ್ಮ ಯೋಧ ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಚಿಕ್ಕಪ್ಪ ಕೆ. ಮೋಹನನ್ (56) ಅವರ ಸ್ಥಿತಿ ಚಿಂತಾಜನಕವಾಗಿದೆ.
ರಾಮಮನೋಹರ ಲೋಹಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರುವ ಮೋಹನನ್ ಅವರಿಗೆ ಶೇ 95ರಷ್ಟು ಸುಟ್ಟ ಗಾಯಗಳಾಗಿದ್ದು, ಕೃತಕ ಉಸಿರಾಟದ ನೆರವು ಅಳವಡಿಸಲಾಗಿದೆ. ಅವರನ್ನು ನಿರಂತರವಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಅಧೀಕ್ಷಕ ಟಿ.ಎಸ್. ಸಿಧು ಹೇಳಿದ್ದಾರೆ.
ಈ ಮಧ್ಯೆ, ಸೋದರನನ್ನು ನೋಡಲು ಧಾವಿಸಿರುವ ಸಂದೀಪ್ ತಂದೆ ಉನ್ನಿಕೃಷ್ಣನ್, ‘26/11 ಮುಂಬೈ ಸ್ಫೋಟಕ್ಕೆ ಬಲಿಯಾದವರಿಗೆ ಸರ್ಕಾರ ಏನೂ ಮಾಡಿಲ್ಲ ಎಂಬುದು ಮೋಹನನ್ ಅವರ ವೈಯಕ್ತಿಕ ಅಭಿಪ್ರಾಯವೇ ವಿನಾ ನಮಗೂ ಅದಕ್ಕೂ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ನಮ್ಮ ಪುತ್ರ ಸಂದೀಪ್ಗೆ ಅರ್ಹವಾದ ಎಲ್ಲ ಗೌರವವೂ ಸರ್ಕಾರದಿಂದ ಸಿಕ್ಕಿದೆ. ಮೋಹನನ್ ಬರೆದಿರುವ ಆತ್ಮಹತ್ಯೆ ಟಿಪ್ಪಣಿ ಅವನ ವೈಯಕ್ತಿಕ ಅಭಿಪ್ರಾಯ’ ಎಂದು ಉನ್ನಿಕೃಷ್ಣನ್ ಪತ್ರಕರ್ತರಿಗೆ ಹೇಳಿದ್ದಾರೆ.
ಮುಂಬೈ ಸ್ಫೋಟಕ್ಕೆ ಬಲಿಯಾದವರನ್ನು ಸರ್ಕಾರ ನಡೆಸಿಕೊಂಡ ರೀತಿಯಿಂದ ಮೋಹನನ್ ಹತಾಶರಾಗಿದ್ದಾರೆ. ಈ ಬಗ್ಗೆ ಅವರು ಹೇಳಿಕೆ ನೀಡಿದ್ದಾರೆ ಎಂದು ಆಸ್ಪತ್ರೆ ವೈದ್ಯರೊಬ್ಬರು ತಿಳಿಸಿದ್ದಾರೆ.
‘ಕಂದಹಾರ್ ಉಗ್ರರನ್ನು ಸರ್ಕಾರ ಬಿಡುಗಡೆ ಮಾಡಿದ ಪರಿಣಾಮವೇ ಮುಂಬೈ ಮೇಲೆ ನಡೆದ ದಾಳಿ. ಸಂದೀಪ್ ನೋವು ಹೇಗಿತ್ತು ಎಂಬುದನ್ನು ಅನುಭವಿಸಲು ಬೆಂಕಿ ಹಚ್ಚಿಕೊಂಡಿದ್ದಾಗಿ ಮೋಹನನ್ ಹೇಳಿದ್ದಾರೆ.