ಮಳವಳ್ಳಿ: ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯಿರುವ ಪ್ರವಾಸಿತಾಣ ಗಗನಚುಕ್ಕಿ ಜಲಪಾತದ ಬಳಿ ಪ್ರವಾಸೋದ್ಯಮ ಇಲಾಖೆವತಿಯಿಂದ ಅಭಿವೃದ್ಧಿಪಡಿಸಲು ಮೂರು ಕೋಟಿ ರೂಪಾಯಿ ಮಂಜೂರಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ತಾಲ್ಲೂಕಿನ ದೊಡ್ಡಬೂವಳ್ಳಿಯಲ್ಲಿ ರೂ.25 ಲಕ್ಷ ವೆಚ್ಚದಲ್ಲಿ ಭಾನುವಾರ ಪರಿಶಿಷ್ಟಜಾತಿ ಕಾಲೋನಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಮೂರು ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲು ಯೋಜನೆ ಸಿದ್ಧಪಡಿಸಲಾಗಿದ್ದು, ಈಗಾಗಲೇ ಒಂದು ಕೋಟಿ ರೂ.ಬಿಡುಯಾಗಿದೆ ಎಂದರು.
ಇದಲ್ಲದೇ ರೂ.116.30 ಲಕ್ಷ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 209ರಿಂದ ಗಗನಚುಕ್ಕಿ ಜಲಪಾತ ಪ್ರವಾಸಿ ತಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ, ರೂ.90 ಲಕ್ಷ ವೆಚ್ಚದಲ್ಲಿ ಮಳವಳ್ಳಿ-ಪೂರಿಗಾಲಿ ರಸ್ತೆ, ರೂ.90 ಲಕ್ಷ ವೆಚ್ಚದಲ್ಲಿ ಮಳವಳ್ಳಿ- ಬಿ.ಜಿ.ಪುರ ರಸ್ತೆ ಅಭಿವೃದ್ಧಿಗೆ, ರೂ.75 ಲಕ್ಷ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 209ರಿಂದ(ದಾಸನದೊಡ್ಡಿಬಳಿ) ದ್ಯಾವಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ, ರೂ.25 ಲಕ್ಷ ವೆಚ್ಚದಲ್ಲಿ ಬಿ.ಜಿ.ಪುರ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಎನ್.ವಿಶ್ವಾಸ್, ಶಿವಮ್ಮ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿಮರಿಸ್ವಾಮಿ,ಸದಸ್ಯರಾದ ಬಸವರಾಜು, ಗುರುಸ್ವಾಮಿ,ಪ್ರಕಾಶ್, ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ್ ಇತರರು ಇದ್ದರು.