ಸಿರ್ಸಾ /ನವದೆಹಲಿ (ಪಿಟಿಐ): ಮಾಜಿ ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಹರಿಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಾಂಡಾ ಅವರ ವಿರುದ್ಧ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಡಿ.ಕೆ.ಜಂಗಲ ಅವರು ಮಾಜಿ ಸಚಿವರ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿ ಆದೇಶಿಸಿದ್ದಾರೆ.
ನ್ಯಾಯಾಲಯದ ಎದುರು ದೆಹಲಿ ಪೊಲೀಸರು `ಆರೋಪಿ ಕಾಂಡಾ ಅವರನ್ನು ಇನ್ನೂ ಬಂಧಿಸಬೇಕಿದೆ~ ಎಂಬ ಹೇಳಿಕೆ ನೀಡಿದ ನಂತರ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ನೀಡಿದೆ.
ಈ ನಡುವೆ ಕಾಂಡಾ ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.
ಏತನ್ಮಧ್ಯೆ ಬುಧವಾರ ತಡರಾತ್ರಿ ದೆಹಲಿ ಪೊಲೀಸರು ಹರಿಯಾಣದ ಸಿರ್ಸಾದಲ್ಲಿರುವ ಮಾಜಿ ಸಚಿವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ವದಂತಿಗಳ ಪ್ರಕಾರ ಕಾಂಡಾ ನೇಪಾಳಕ್ಕೆ ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.