ಬೆಂಗಳೂರು: `ಅನೇಕ ವಿದೇಶೀಯರ ಆಕ್ರಮಣಗಳ ನಂತರವೂ ತನ್ನತನವನ್ನು ಕಳೆದುಕೊಳ್ಳದೇ, ಇಂದಿಗೂ ಜೀವಂತವಾಗಿರುವುದು ನಮ್ಮ ಸಂಸ್ಕೃತಿಯ ವೈಶಿಷ್ಟ್ಯ' ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು.ನಗರದಲ್ಲಿ ಭಾನುವಾರ ನಡೆದ ಸಂಸ್ಕೃತ ವಿದ್ವಾಂಸ ಡಾ.ಕೆ.ಎಸ್.ನಾರಾಯಣಾಚಾರ್ಯ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
`ಇತರೆ ದೇಶಗಳ ಮೇಲೆ ಆಕ್ರಮಣಗಳು ನಡೆದ ಸಂದರ್ಭದಲ್ಲಿ ಅಲ್ಲಿನ ಸಂಸ್ಕೃತಿ ಅವನತಿ ಕಂಡಿದೆ. ಆದರೆ, ಎಷ್ಟೆಲ್ಲಾ ಆಕ್ರಮಣಗಳು ನಡೆದರೂ ನಮ್ಮ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ. ಇದಕ್ಕೆ ನಾರಾಯಣಾಚಾರ್ಯರಂಥ ವಿದ್ವಾಂಸರು ಕಾರಣ. ಅವರ ಮಾರ್ಗದರ್ಶನ ನಮಗೆಲ್ಲರಿಗೆ ಅಗತ್ಯ' ಎಂದು ಅವರು ನುಡಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, `ಆಧುನಿಕ ಮತ್ತು ವೈಜ್ಞಾನಿಕ ಬೆಳವಣಿಗೆಯ ಇಂದಿನ ಕಾಲಘಟ್ಟದಲ್ಲಿ ಸಮಾಜ ಅನೀತಿಗಳನ್ನು ಅಳವಡಿಸಿಕೊಳ್ಳುತ್ತಿದೆ. ಆದರೆ, ನಮ್ಮ ಸಮಾಜದಲ್ಲಿ ನಾರಾಯಣಾಚಾರ್ಯರಂಥ ವಿದ್ವಾಂಸರಿರುವ ಕಾರಣ ಅನೀತಿಗಳು ನಿಯಂತ್ರಣವಾಗುತ್ತಿವೆ. ನಾನು ಅವರ ಸಂಪರ್ಕಕ್ಕೆ ಬಂದ ನಂತರ ಬಾಹ್ಯ ಮತ್ತು ಭಾವನಾತ್ಮಕ ಜಗತ್ತಿನ ನಡುವಿನ ವ್ಯತ್ಯಾಸದ ಅರಿವಾಗಿದೆ' ಎಂದರು.
ಸಮಾರಂಭದಲ್ಲಿ ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯನ್ನು ಸನ್ಮಾನಿಸಲಾಯಿತು. `ಆರ್ಷೇಯ' ಅಭಿನಂದನಾ ಗ್ರಂಥವನ್ನು ಶಂಕರಮೂರ್ತಿ ಬಿಡುಗಡೆ ಮಾಡಿದರು.