ನವದೆಹಲಿ (ಪಿಟಿಐ): ಭಾರತದಲ್ಲಿ ಈವರೆಗೆ ಹಲವಾರು ‘ದೇವಮಾನವರು’ ಬಂದು ಹೋಗಿದ್ದಾರೆ. ಆದರೆ ಸತ್ಯ ಸಾಯಿಬಾಬಾ ಅವರಷ್ಟು ಹೆಸರು ಮತ್ತು ಖ್ಯಾತಿ ಗಳಿಸಿದವರು ಮಾತ್ರ ಮತ್ತೊಬ್ಬರಿಲ್ಲ. ಸಾಮಾನ್ಯ ಭಕ್ತರಿಂದ ಹಿಡಿದು ದೇಶದ ರಾಷ್ಟ್ರಪತಿಯವರೆಗೂ ಅವರ ಪ್ರಭಾವ ಹಬ್ಬಿತ್ತು. ಅಷ್ಟೇ ಅಲ್ಲ ಗಡಿಗಳನ್ನೂ ಮೀರಿ ಜಗತ್ತಿನಾದ್ಯಂತ ವಿಸ್ತರಿಸಿತ್ತು.
ಪ್ರಧಾನಿಗಳು, ಕೇಂದ್ರ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ಉನ್ನತ ರಾಜಕಾರಣಿಗಳು, ಚಿತ್ರನಟರು, ಕ್ರೀಡಾಪಟುಗಳು, ಕೈಗಾರಿಕೋದ್ಯಮಿಗಳು... ಹೀಗೆ ಯಾವ ಕ್ಷೇತ್ರದಲ್ಲಿ ಬಾಬಾ ಅವರ ಅನುಯಾಯಿಗಳು ಇರಲಿಲ್ಲ ಎಂದು ಹೇಳುವುದೇ ಕಷ್ಟ ಎಂಬಷ್ಟರ ಮಟ್ಟಿಗೆ ಅವರ ಪ್ರಭಾವಳಿ ಹರಡಿತ್ತು.
ಆಂಧ್ರದ ಅನಂತಪುರದಂತಹ ಒಣ ಜಿಲ್ಲೆಯ ಸಣ್ಣ ಹಳ್ಳಿಯಾಗಿದ್ದ ಪುಟ್ಟಪರ್ತಿಯ ಸಾಮಾನ್ಯ ಕುಟುಂಬದಲ್ಲಿ ಬಾಬಾ ಜನಿಸಿದ್ದರು.
ಆದರೆ ಇಂದು ಅಂತರರಾಷ್ಟ್ರೀಯ ನಕ್ಷೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಪುಟ್ಟಪರ್ತಿಯ ‘ಪ್ರಶಾಂತಿ ನಿಲಯಂ’ ಆಶ್ರಮಕ್ಕೆ ದಿನಂಪ್ರತಿ ವಿದೇಶಿ ಭಕ್ತರು ಬಂದುಹೋಗುತ್ತಾರೆ. ಅತ್ಯುತ್ತಮ ವಿಮಾನ ನಿಲ್ದಾಣ ಸಹ ಇಲ್ಲಿದ್ದು, ದೇಶ ವಿದೇಶಗಳಿಂದ ಬಾಬಾ ಅವರ ಅನುಯಾಯಿಗಳನ್ನು ಅವು ಹೊತ್ತು ತರುತ್ತವೆ.