ಮಾಲೂರು: ತಾಲ್ಲೂಕಿನ ಗಡಿಭಾಗಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಮುಖಾಂತರ ಸಾಹಿತ್ಯ ಪರಿಷತ್ತು ಕನ್ನಡಿಗರ ಧ್ವನಿಯಾಗುವಂತೆ ಮಾಡಲಾಗುವುದು ಎಂದು ನೂತನ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಜೆ.ಜಿ.ನಾಗರಾಜ್ ತಿಳಿಸಿದರು.
ಸೋಮವಾರ ಪಟ್ಟಣದ ಕೃಷಿಕ ಸಮಾಜ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
`ಜಿಲ್ಲೆಯ ಯುವ ಕವಿಗಳನ್ನು ಪ್ರೋತ್ಸಾಹಿಸಲು ಕಾವ್ಯ, ಕವಿಗೋಷ್ಠಿ, ಕಮ್ಮಟ ಏರ್ಪಡಿಸಲಾಗುವುದು. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಸಾಹಿತ್ಯ ಪರಿಷತ್ ಭವನ ನಿರ್ಮಿಸುವುದಾಗಿ ನಾಗರಾಜ್ ಹೇಳಿದರು.
ಚುನಾವಣೆಗೆ ಸ್ಪರ್ಧಿಸಿದ್ದ ತಮ್ಮಯ್ಯ ಹಾಗೂ ಕಲಾವಿಧ ವಿಷ್ಣು ಅವರ ಸಹಕಾರದೊಂದಿಗೆ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ತಾಲ್ಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ಎ.ಅಶ್ವತ್ಥರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ರಾಮಸ್ವಾಮಿ ರೆಡ್ಡಿ, ನಾರಾಯಣಸ್ವಾಮಿ, ಸಹ್ಯಾದ್ರಿ ಕಾಲೇಜು ಅಧ್ಯಕ್ಷ ಉದಯಕುಮಾರ್, ಎಂ.ಜಿ.ಮಧುಸೂದನ್, ಮುಖಂಡರಾದ ಆರ್.ಪ್ರಭಾಕರ್,ಎಸ್.ವಿ.ಶ್ರೀಹರಿ, ನಾಗರಾಜ್ರೆಡ್ಡಿ, ಚಿದಾನಂದ, ಶಶಿಧರ್, ಚಂದ್ರು, ಎಸ್. ನಾರಾಯಣಸ್ವಾಮಿ ಭಾಗವಹಿಸಿದ್ದರು.