ಬಳ್ಳಾರಿ: ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಅಂತರರಾಜ್ಯ ಗಡಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ತುಮಟಿ ಗಣಿ ಕಂಪೆನಿ ಮಾಲೀಕ ಟಪಾಲ್ ಗಣೇಶ್ ಶನಿವಾರ ಇಲ್ಲಿ ಆಗ್ರಹಿಸಿದರು.
ಸಂಡೂರು ತಾಲ್ಲೂಕಿನ ತುಮಟಿ ಮತ್ತು ವಿಠಲಾಪುರ ಗ್ರಾಮಗಳ ಬಳಿ ಗಣಿ ಗುತ್ತಿಗೆ ನೀಡಿರುವ ಪ್ರದೇಶಗಳಲ್ಲಿ, ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸದೆ ಇದ್ದುದರಿಂದ ಅಕ್ರಮ ಹಾಗೂ ಗಣಿ ಒತ್ತುವರಿ ನಡೆದಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ವಂಚನೆ ಪ್ರಕರಣ ದಾಖಲಿಸಿ: ಇದೀಗ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಜನಾರ್ದನರೆಡ್ಡಿ ಅವರ ಬೆದರಿಕೆಯನ್ನು ವಿರೋಧಿಸದೆ, ಹಂಚಿಕೆ ಆಧಾರದಲ್ಲಿ ಗಣಿಗಾರಿಕೆ ನಡೆಸಲು ಸಮ್ಮತಿ ಸೂಚಿಸಿರುವ ರಾಜ್ಯದ 18ಕ್ಕೂ ಅಧಿಕ ಗಣಿ ಮಾಲೀಕರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಹಂಚಿಕೆ ಆಧಾರದಲ್ಲಿ ಅವರೂ ದುಡ್ಡು ಮಾಡಿರುವುದರಿಂದ ಅವರ ವಿರುದ್ಧವೂ ಕ್ರಮ ಅಗತ್ಯ ಎಂದು ಅವರು ತಿಳಿಸಿದರು.