ವಾಘಾ (ಪಾಕಿಸ್ತಾನ) (ಪಿಟಿಐ, ಐಎಎನ್ಎಸ್): ಭಾರತ– ಪಾಕಿಸ್ತಾನ ಗಡಿಯಲ್ಲಿ ಶಾಂತಿ ಕಾಪಾಡಲು ಉಭಯ ದೇಶಗಳ ಉನ್ನತ ಸೇನಾಧಿಕಾರಿಗಳು ಸಮ್ಮತಿಸಿದ್ದಾರೆ. ಸುಮಾರು 14 ವರ್ಷಗಳ ನಂತರ ಭಾರತ ಹಾಗೂ ಪಾಕಿಸ್ತಾನ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕರು (ಡಿಜಿಎಂಒ) ಮಂಗಳವಾರ ಮುಖಾಮುಖಿಯಾಗಿ ಸಮಾಲೋಚನೆ ನಡೆಸಿದರು.
ಗಡಿಯಲ್ಲಿ ಕದನವಿರಾಮ ಉಲ್ಲಂಘನೆಯಾಗದಂತೆ ಈಗ ಅನುಸರಿಸಲಾಗುತ್ತಿರುವ ವಿಧಾನಗಳಿಗೆ ‘ಶಕ್ತಿ ತುಂಬುವ’ ಕಾರ್ಯಕ್ಕೆ ಉಭಯ ದೇಶಗಳು ಈ ವೇಳೆ ನಿರ್ಧಾರಕ್ಕೆ ಬಂದವು. ಡಿಜಿಎಂಒಗಳಾದ ಪಾಕ್ನ ಮೇಜರ್ ಜನರಲ್ ಅಮೀರ್ ರಿಯಾಜ್ ಹಾಗೂ ಭಾರತದ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ ಅವರುಗಳು ವಾಘಾದ ಅಟ್ಟಾರಿ ಗಡಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆಸಿದರು. ಉಭಯ ರಾಷ್ಟ್ರಗಳ ಇನ್ನೂ ಕೆಲ ಪ್ರಮುಖ ಸೇನಾ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.
‘ಫಲಪ್ರದ, ರಚನಾತ್ಮಕ ಭೇಟಿ ಇದಾಗಿತ್ತು, ಗಡಿ ನಿಯಂತ್ರಣ ರೇಖೆಗುಂಟ ಕದನವಿರಾಮ ಉಲ್ಲಂಘನೆ ಯಾಗುತ್ತಿರುವ ಬಗ್ಗೆ ಹಾಗೂ ಈ ಸಂಬಂಧ ಸದ್ಯ ಅನುಸರಿಸಲಾಗುತ್ತಿರುವ ವಿಧಾನಗಳ ಕುರಿತು ಚರ್ಚೆ ನಡೆಸಲಾಯಿತು’ ಎಂದು ವಿನೋದ್ ಭಾಟಿಯಾ ತಿಳಿಸಿದರು. ಸಾಮಾನ್ಯವಾಗಿ ಎರಡೂ ರಾಷ್ಟ್ರಗಳ ಡಿಜಿಎಂಒಗಳು ಪ್ರತಿ ಮಂಗಳವಾರ ಹಾಟ್ಲೈನ್ ಸಂಪರ್ಕದಲ್ಲಿರುತ್ತಿದ್ದು, ಇನ್ನು ಮುಂದೆ ಇಂತಹ ಮಾತುಕತೆಗಳು ಮತ್ತಷ್ಟು ಪರಿಣಾಮಕಾರಿ ಎನಿಸಬೇಕು ಎನ್ನುವ ನಿರ್ಧಾರಕ್ಕೂ ಸೇನಾಧಿ ಕಾರಿಗಳು ಬಂದಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಡಾ. ಮನಮೋಹನ್ ಸಿಂಗ್ ಹಾಗೂ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರುಗಳು ಸೆ. 29 ರಂದು ವಿಶ್ವಸಂಸ್ಥೆಯಲ್ಲಿ ಭೇಟಿಯಾದಾಗ ಡಿಜಿಎಂಒಗಳ ಮಟ್ಟದ ಸಭೆ ನಡೆಸುವ ಕುರಿತು ನಿರ್ಧಾರಕ್ಕೆ ಬಂದಿದ್ದರು. ವಿಶ್ವಸಂಸ್ಥೆಯ ಸಭೆಯಲ್ಲಿ ತೆಗೆದು ಕೊಂಡ ನಿರ್ಧಾರದ ತರುವಾಯವೂ ಕದನವಿರಾಮ ಉಲ್ಲಂಘನೆಯ ಕುರಿತು ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ಸಭೆ ನಡೆಯದಿರುವ ಕುರಿತು ಪ್ರಧಾನಿ ಸಿಂಗ್ ಈಚೆಗೆ ಪಾಕ್ ಪ್ರಧಾನಿ ಬಳಿ ತಮ್ಮ ಅಸಮಾಧಾನ ಹೊರಹಾಕಿದ್ದರು.
ಹಾಗಾಗಿ ಈ ಸಭೆ ನಡೆದಿದೆ ಎನ್ನಲಾಗಿದೆ. ಉಭಯ ರಾಷ್ಟ್ರಗಳ ನಡುವೆ ಡಿಜಿಎಂಒ ಮಟ್ಟದ ಮಾತುಕತೆ ಕಾರ್ಗಿಲ್ ಕದನದ ತರುವಾಯ 1999ರ ಜುಲೈನಲ್ಲಿ ನಡೆದಿತ್ತು. ಇತ್ತೀಚೆಗೆ ಕದನವಿರಾಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಆಗಸ್್ಟನಲ್ಲಿ ಪಾಕ್ ನಡೆಸಿದ ದಾಳಿಗೆ ಐವರು ಭಾರತೀಯ ಸೈನಿಕರು ಹತರಾಗಿದ್ದರು. ಗಡಿಯಲ್ಲಿ ತ್ವೇಷಮಯ ಸ್ಥಿತಿ ತಿಳಿಗೊಳಿಸುವಲ್ಲಿ ಈ ಭೇಟಿ ನೆರವಾಗುತ್ತದೆ ಎನ್ನುವ ವಿಶ್ವಾಸವನ್ನು ‘ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ’ ವ್ಯಕ್ತಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.