ನವದೆಹಲಿ (ಪಿಟಿಐ): ತನ್ನ ಅತ್ಯಂತ ಹಳೆಯ ಮಿತ್ರ ಪಕ್ಷ ಶಿವಸೇನಾ ಜತೆ ಸಂಘರ್ಷದ ಹಾದಿ ಹಿಡಿದಿರುವ ಬಿಜೆಪಿ, ಮುಂದಿನ ತಿಂಗಳು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಸೂತ್ರವನ್ನು ಒಪ್ಪಿಕೊಳ್ಳಿ ಇಲ್ಲವೇ ಮೈತ್ರಿ ಕಡಿದುಕೊಳ್ಳಲು ಸಿದ್ಧರಾಗಿ ಎಂಬ ಎಚ್ಚರಿಕೆ ನೀಡಿದೆ. ಆದರೆ ಈ ಎಚ್ಚರಿಕೆಯನ್ನು ತಿರಸ್ಕರಿಸಿರುವ ಶಿವಸೇನಾ ಮುಖಂಡರು, ತಮಗೆ ಯಾರೂ ಆದೇಶ ನೀಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
ಒಟ್ಟು 288 ಕ್ಷೇತ್ರಗಳ ಪೈಕಿ 135ರಲ್ಲಿ ಬಿಜೆಪಿ ಸ್ಪರ್ಧಿಸುವ ಸೂತ್ರವನ್ನು ಶಿವಸೇನಾ ತಿರಸ್ಕರಿಸಿದೆ. ಆದರೆ ಬಿಜೆಪಿ ಮತ್ತು ಶಿವಸೇನಾ ತಲಾ 135 ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಮತ್ತು ಉಳಿದ ಕ್ಷೇತ್ರಗಳನ್ನು ಇತರ ಸಣ್ಣ ಮಿತ್ರ ಪಕ್ಷಗಳಿಗೆ ಬಿಟ್ಟುಕೊಡಬೇಕು ಎಂಬ ಸೂತ್ರಕ್ಕೆ ಬಿಜೆಪಿ ಅಂಟಿಕೊಂಡಿದೆ.
ಪರಸ್ಪರ ಪೂರಕವಾದ ಮತ್ತು ಗೌರವಾರ್ಹವಾದ ಸೀಟು ಹಂಚಿಕೆಗೆ ಒಪ್ಪಿಗೆ ಇದೆಯೇ ಇಲ್ಲವೇ ಎಂಬುದನ್ನು ತಿಳಿಸಲು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಬಿಜೆಪಿ ಗುರುವಾರ ಸಂಜೆಯ ವರೆಗಿನ ಗಡುವು ನೀಡಿತ್ತು.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಗುರುವಾರ ಬೆಳಿಗ್ಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಆತ್ಮಗೌರವದ ಬೆಲೆ ತೆತ್ತು ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದಾರೆ. ‘ಆತ್ಮಗೌರವದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಾವು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಮೈತ್ರಿಯ ಬಗ್ಗೆ ಚರ್ಚೆ ನಡೆಸಿದ್ದೇವೆ. ಶಿವಸೇನಾ ಯಾರದೇ ಆದೇಶ ಪಾಲಿಸುವುದಿಲ್ಲ. ಉದ್ಧವ್ ಅವರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಬಿಜೆಪಿ ಗಡುವು ನೀಡಿದ ಬೆನ್ನಲ್ಲೇ ಉದ್ಧವ್ ಠಾಕ್ರೆ ತಮ್ಮ ನಿವಾಸದಲ್ಲಿ ಪಕ್ಷದ ಪ್ರಮುಖರ ತುರ್ತು ಸಭೆ ನಡೆಸಿದರು. ಬಿಜೆಪಿಯೊಂದಿಗಿನ ಮೈತ್ರಿಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಭೆಯಲ್ಲಿ ಉದ್ಧವ್ ಠಾಕ್ರೆ ಅವರಿಗೆ ನೀಡಲಾಗಿದೆ ಎಂದ ರಾವುತ್ ತಿಳಿಸಿದ್ದಾರೆ. ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿರುವ ಬಿಜೆಪಿಯ ಪ್ರಸ್ತಾವಕ್ಕೆ ಶಿವಸೇನಾ ಪ್ರತಿಕ್ರಿಯೆಯನ್ನೇ ನೀಡದಿರುವುದು ಬಿಜೆಪಿಯ ಅತೃಪ್ತಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಗೆ ಪ್ರತಿಕ್ರಿಯೆ ನೀಡದ ಠಾಕ್ರೆ ಈ ವಾರದ ಆರಂಭದಲ್ಲಿಯೇ ಸಾರ್ವಜನಿಕವಾಗಿ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.