ಕುಶಾಲನಗರ: ಕುಶಾಲನಗರದಲ್ಲಿ ಸೋಮವಾರ ನಡೆಯಲಿರುವ ಗಣಪತಿ ವಾರ್ಷಿಕ ರಥೋತ್ಸವಕ್ಕೆ ದೇವಸ್ಥಾನ ಸಮಿತಿ ಭರದ ಸಿದ್ಧತೆ ಆರಂಭಿಸಿದೆ.
ರಥೋತ್ಸವದ ಅಂಗವಾಗಿ ದೇವಸ್ಥಾನ ವಿದ್ಯುದ್ದೀಪಾಲಂಕಾರ ಗಳಿಂದ ಕಂಗೊಳಿಸುತ್ತಿದೆ. ಭಾನುವಾರ ದೇವಸ್ಥಾನದಲ್ಲಿ ಚಂದ್ರಬಿಂಬೋತ್ಸವ ವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನ. 14ರ ಸೋಮವಾರ ಮಧ್ಯಾಹ್ನ 12ಕ್ಕೆ ನಡೆಯಲಿರುವ ರಥೋತ್ಸವಕ್ಕೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಕೈಗೊಳ್ಳಲಾಗಿದೆ. ಕಳೆದ ಮೂರು ದಿನಗಳಿಂದ ವಿವಿಧ ಪೂಜಾ ವಿಧಿ ವಿಧಾನಗಳನ್ನು ನಡೆಸ ಲಾಗಿದೆ ಎಂದು ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ಭಾನುವಾರ ತಿಳಿಸಿದರು.
ವೈಶಿಷ್ಟ್ಯ ಪೂರ್ಣವಾಗಿ ನಡೆಯುವ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡು ತೇರನ್ನು ಎಳೆಯಲಿದ್ದಾರೆ. ರಥೋತ್ಸವದ ಬಳಿಕ ಭಕ್ತಾದಿಗಳಿಗೆ ದೇವಸ್ಥಾನ ಸಮಿತಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸ ಲಾಗಿದೆ. ರಥೋತ್ಸವದ ಅಂಗವಾಗಿ ಈ ವರ್ಷ ಸಂತೆ ಮೈದಾನದ ಬದಲಿಗೆ ಬೈಚನಹಳ್ಳಿ ಬಳಿ ಗುಂಡೂರಾವ್ ಬಡಾವಣೆಯಲ್ಲಿ ಹತ್ತು ದಿನಗಳ ಕಾಲದ ಜಾತ್ರೆ ನಡೆಸಲು ಪೂರ್ವ ತಯಾರಿ ನಡೆಸಲಾಗಿದೆ.
ಜಾತ್ರಾ ಉತ್ಸವದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸೇರಿದಂತೆ ನೆರೆಯ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಗಡಿಭಾಗದ ಜನತೆ ಕೂಡ ಭಾಗವಹಿಸಲಿದ್ದಾರೆ.
ನ. 23ರಂದು ಬೆಳಿಗ್ಗೆ 10 ಕ್ಕೆ ಜಾತ್ರಾ ಮೈದಾನದಲ್ಲಿ ಉತ್ತಮ ರಾಸುಗಳ ಆಯ್ಕೆ ನಡೆಯಲಿದ್ದು, ನ. 24 ರಂದು ಮಧ್ಯಾಹ್ನ 3.30 ಕ್ಕೆ ಬಹುಮಾನ ವಿತರಿಸಲಾಗುವುದು ಎಂದು ಸಮಿತಿ ಉಪಾಧ್ಯಕ್ಷ ವಿ.ಡಿ.ಪುಂಡರೀಕಾಕ್ಷ ತಿಳಿಸಿದರು.