ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪನ ಸನ್ನಿಧಿಯಲ್ಲಿ ನೀರಿಗೆ ಬಿದ್ದ ನಾಗರ

Last Updated 1 ಅಕ್ಟೋಬರ್ 2011, 8:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಣೇಶನನ್ನು ನೀರಿಗೆ ತಳ್ಳಿ ಜನರೆಲ್ಲ ದಸರೆಯ ಮೂಡ್‌ನಲ್ಲಿದ್ದರೆ ಈ ನಾಗಪ್ಪ, ಗೆಳೆಯ ಗಣಪನನ್ನು ನೋಡಲು ಬಂದಿದ್ದ. ಆದರೆ ದೊಡ್ಡಹೊಟ್ಟೆಯ ಗೆಳೆಯನನ್ನು ನೋಡುವ ಉತ್ಸಾಹದಲ್ಲಿ ಎಚ್ಚರ ತಪ್ಪಿ ಬಾವಿಗೆ ಬಿದ್ದ. ನೀರಿಗೆ ಬಿದ್ದು ಪ್ರಾಣಭಯದಿಂದ ಒದ್ದಾಡುತ್ತಿದ್ದ ನಾಗಪ್ಪ ಪನ್ನಗಭೂಷಣನನ್ನು ಸ್ಮರಿಸಿದ್ದೇ ತಡ, `ಶಿವ~ ಅಲ್ಲಿ ಪ್ರತ್ಯಕ್ಷವಾಗಿಯೇ ಬಿಟ್ಟ, ಪ್ರಾಣ ಕಾಪಾಡಿದ...

ಆತಂಕ, ಕುತೂಹಲ, ಭಯ, ಭಕ್ತಿ ಮುಂತಾದ ಭಾವಗಳಿಗೆ ಸಾಕ್ಷಿಯಾದ ಸುಮಾರು ಒಂದು ತಾಸು ಕಾಲ `ರಂಜನೆ~ ನೀಡಿದ ಈ ಘಟನೆ ನಡೆದದ್ದು ನಗರದ ಗುಡ್ಸ್‌ಶೆಡ್ ರಸ್ತೆಯಲ್ಲಿರುವ ಅಷ್ಟವಿನಾಯಕ ದೇವಸ್ಥಾನದ ಆವರಣದಲ್ಲಿ, ಶುಕ್ರವಾರ ಬೆಳಿಗ್ಗೆ.

ದೇವಸ್ಥಾನದ ಸಮೀಪದಲ್ಲಿ ನಿರ್ಮಿಸಲಾದ ಬಾವಿಯಲ್ಲಿ ಈ ಬಾರಿ ಅಷ್ಟವಿನಾಯಕ ದೇವಸ್ಥಾನ ಸಮಿತಿಯವರು ಗಣೇಶನನ್ನು ವಿಸರ್ಜಿಸಿದ್ದರು. ಈ ವಿಗ್ರಹಗಳನ್ನು ತೆಗೆಯುವುದಕ್ಕೆಂದು ಬೆಳಿಗ್ಗೆ ಆಳುಗಳು ಬಾವಿಗೆ ಇಳಿದಾಗ  ಸಾವಿನೊಂದಿಗೆ ಸೆಣೆಸುತ್ತಿದ್ದ ಸುಮಾರು ನಾಲ್ಕೂವರೆ ಅಡಿ ಉದ್ದದ ನಾಗಪ್ಪನನ್ನು ನೋಡಿದ್ದಾರೆ.

ಹಾವು ಹಿಡಿಯುವ ಸ್ನೇಕ್ ಶಿವು ಅವರಿಗೆ ತಕ್ಷಣ ಕರೆ ಹೋಗಿದೆ. ಶಿವು ಬಂದ ನಂತರ ಅಲ್ಲಿ `ಹೈಡ್ರಾಮಾ~ ನಡೆಯಿತು. ನಿಚ್ಚಣಿಕೆ ಇರಿಸಿ 35 ಅಡಿ ಆಳದ ಬಾವಿಗಿಳಿದ ಶಿವು ಸಲೀಸಾಗಿ ನಾಗಪ್ಪನನ್ನು ಮೇಲೆತ್ತಿ ತಂದರು. ಆದರೆ ಇನ್ನೇನು ನಿಚ್ಚಣಿಕೆಯ ಕೊನೆಯ ಮೆಟ್ಟಿಲು ತುಳಿಯುವಷ್ಟರಲ್ಲಿ ಅವರ ಕೈಯಿಂದ ಜಾರಿದ ನಾಗಪ್ಪ ಮತ್ತೆ ನೀರಿಗೆ ಬಿದ್ದ.
 
ಹಿಂಬಾಲಿಸಿದ ಶಿವುಗೆ ಈ ಬಾರಿ ನಾಗಪ್ಪ ಚೋಕ್ ಕೊಟ್ಟ. ನೀರಿನ ಒಳಗೆ, ಗಣೇಶ ಮೂರ್ತಿಯ ಕೆಳಗೆ ಅಡಗಿ ಕುಳಿತ ಆತನನ್ನು ಹಿಡಿಯಲು ಭಾರೀ ಶ್ರಮಪಡಬೇಕಾಯಿತು. ಕೊನೆಗೂ ಮಣಿದ ನಾಗಪ್ಪ `ಬಂಧಿ~ಯಾಗಿ ಮೇಲೆ ಬಂದ.

ಪೂಜೆ, ನಮನ:
ಈ ಕಾರ್ಯಾಚರಣೆ ವೀಕ್ಷಿಸಲು ನೂರಾರು ಮಂದಿ ಸೇರಿದ್ದರು. ಅವರನ್ನು ನಿಯಂತ್ರಿಸುವುದಕ್ಕಾಗಿ ದೇವಸ್ಥಾನದ ಆವರಣದ ಗೇಟ್ ಬಂದ್ ಮಾಡಲಾಯಿತು. ಹಾವನ್ನು ರಕ್ಷಿಸಿದ ನಂತರ ದೇವಸ್ಥಾನದೊಳಗೆ ಬಿಟ್ಟು ವಿಶ್ರಾಂತಿ ನೀಡಲಾಯಿತು. ನಂತರ ಜನರಿಗೆ ಅದರ `ದರ್ಶನ~ಕ್ಕೆ ಅವಕಾಶ ನೀಡಲಾಯಿತು. ಗಣಪತಿ ವಿಗ್ರಹದ ಬಳಿ ನಾಗಪ್ಪ ಹೆಡೆಯೆತ್ತಿ ಪೋಸ್ ಕೊಟ್ಟು ಜನರ ನಮನವನ್ನು ಸ್ವೀಕರಿಸಿದ. ನಂತರ ಬಾಟ್ಲಿಯಲ್ಲಿ ಬಂಧಿಸಲಾದ ನಾಗಪ್ಪನಿಗೆ ಅರ್ಚಕರು ಪೂಜೆ ಸಲ್ಲಿಸಿದರು.

ಕಾರ್ಯಾಚರಣೆಯ ನಂತರ `ಪ್ರಜಾವಾಣಿ~ ಜೊತೆ ಮಾತನಾಡಿದ ಶಿವು, ಇದು ಸ್ಪೆಕ್ಟಿಕಲ್ ಕೋಬ್ರಾ ಜಾತಿಗೆ ಸೇರಿದ ನಾಗರ ಹಾವಾಗಿದ್ದು ಕಲಘಟಗಿ ಬಳಿ ಕಾಡಿಗೆ ಬಿಡಲಾಗುವುದು ಎಂದು ತಿಳಿಸಿದರು.

`ಇದು ಅದ್ಭುತ ಅನುಭವ. ಈ ಘಟನೆಯನ್ನು ನಾನು ಎಂದಿಗೂ ಮರೆಯಲಾರೆ. ಹಾವಿನೊಂದಿಗೆ ಸರಸವಾಡಿ ಅದನ್ನು ಹಿಡಿದ ಶಿವು ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ~ ಎಂದು ಘಟನೆಗೆ ಸಾಕ್ಷಿಯಾಗಿದ್ದ ಶರವಣನ್ ಹಾಗೂ ಶಾಂತಕುಮಾರ ಹೇಳಿದರು.

`ಇಡೀ ದೃಶ್ಯಾವಳಿ ರೋಮಾಂಚಕವಾಗಿತ್ತು. ಬಾವಿಗೆ ಇಳಿದು ಏಕಾಂಗಿಯಾಗಿ ಹಾವನ್ನು ಹಿಡಿದ ಶಿವು ಅವರ ಧೈರ್ಯ ಮೆಚ್ಚತಕ್ಕದ್ದು~ ಎಂದು ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಗುಣಶೇಖರನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT