ಕೋಲಾರ: ಜಿಲ್ಲೆಯ ಕೆಜಿಎಫ್ನಲ್ಲಿರುವ ಚಿನ್ನದ ಗಣಿಯನ್ನು ಮತ್ತೆ ಪ್ರಾರಂಭಿಸಬೇಕು. ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಕೋರಿ ಕೇಂದ್ರದ ಗಣಿ ಸಚಿವ ದಿನ್ಶಾ ಜೆ.ಪಟೇಲ್ ಅವರಿಗೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಮನವಿ ಸಲ್ಲಿಸಿದ್ದಾರೆ.
ಸಚಿವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಮುನಿಯಪ್ಪ, ನಿರುದ್ಯೋಗಿಗಳಾಗಿ ಅಭದ್ರ ಬದುಕನ್ನು ಎದುರಿಸುತ್ತಿರುವ ಗಣಿ ಕಾರ್ಮಿಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜವಳಿ ಪಾರ್ಕ್ ಸೇರಿದಂತೆ ಕೆಲವು ಕಾರ್ಖಾನೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎಂದೂ ಅವರು ಕೋರಿದರು ಎಂದು ಪ್ರಕಟಣೆ ತಿಳಿಸಿದೆ.
ಮಾಜಿ ಅಧ್ಯಕ್ಷರ ಸ್ಮರಣೆ: ವೇಮಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ವಿ.ಎಸ್.ರಾಮಶೆಟ್ಟಿ, ಸಿ.ಎಂ.ಮುನಿಯಪ್ಪ, ಮುನಿಕೃಷ್ಣಪ್ಪ ಮತ್ತಿತರರನ್ನು ಸ್ಮರಿಸುವ ಸಲುವಾಗಿ ತಾಲ್ಲೂಕಿನ ವೇಮಗಲ್ನ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಉದ್ಘಾಟಿಸಿದರು.ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರ ಮಾದರಿಯನ್ನು ಅನುಸರಿಸುವುದು ಅಗತ್ಯ ಎಂದು ನುಡಿದರು.
ವಿಧಾನ ಪರಿಷತ್ ಸದಸ್ಯ ವಿ.ಆರ್.ಸುದರ್ಶನ್ ಅವರ ತಂದೆ ರಾಮಶೆಟ್ಟಿಯವರು ಗ್ರಾಮಕ್ಕೆ ಸಲ್ಲಿಸಿದ ಸೇವೆಯ ಬಗ್ಗೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉದಯಶಂಕರ್ ಮೆಚ್ಚುಗೆಯ ಮಾತನಾಡಿದರು.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಾಗರಾಜ್, ಜರೀನಾತಾಜ್, ಭಾಗ್ಯಮ್ಮ, ಮಾಜಿ ಉಪಾಧ್ಯಕ್ಷರಾದ ಮುನಿಯಪ್ಪ, ರಾಜೇಂದ್ರಪ್ರಸಾದ್, ಮುಖಂಡರಾದ ಸಿ.ಎಂ.ಮುನಿಯಪ್ಪ, ಯುವ ಕಾಂಗ್ರೆಸ್ನ ನಾಗೇಶ್ ಹಾಜರಿದ್ದರು.