ನವದೆಹಲಿ: ಕರ್ನಾಟಕದಲ್ಲಿ `ಎ~ ದರ್ಜೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಪುನರ್ವಸತಿ ಯೋಜನಾ ಪ್ರಕ್ರಿಯೆ ಈ ತಿಂಗಳಾಂತ್ಯಕ್ಕೆ ಮುಗಿಯುವ ಸಾಧ್ಯತೆ ಇರುವುದರಿಂದ ಆಗಸ್ಟ್ ಆರಂಭದಲ್ಲಿ ಮತ್ತೆ ಗಣಿಗಾರಿಕೆ ಆರಂಭವಾಗುವ ಸುಳಿವನ್ನು ಭಾರತೀಯ ಖನಿಜ ಉದ್ಯಮಗಳ ಒಕ್ಕೂಟ (ಫಿಮಿ) ನೀಡಿದೆ. ಇದರಿಂದಾಗಿ ಸುಪ್ರೀಂಕೋರ್ಟ್ನಿಂದ ನಿಷೇಧಕ್ಕೆ ಒಳಗಾಗಿರುವ ಗಣಿಗಾರಿಕೆ ಉದ್ಯಮಕ್ಕೆ ಮತ್ತೆ ಜೀವ ಬರುವಂತಾಗಿದೆ.
ಗಣಿಗಾರಿಕೆ ಉದ್ಯಮಕ್ಕೆ ಪುನರ್ವಸತಿ ಕಲ್ಪಿಸುವಲ್ಲಿ ಭಾರತೀಯ ಅರಣ್ಯ ಸಂಶೋಧನೆ ಹಾಗೂ ಶಿಕ್ಷಣ ಮಂಡಳಿಗೆ (ಐಸಿಎಫ್ಆರ್ಇ) ಅಗತ್ಯ ನೆರವು ನೀಡುತ್ತಿದ್ದು, ಈಗ ಆಗಿರುವ ಪ್ರಗತಿ ಆಧಾರದ ಮೇಲೆ ರಾಜ್ಯದ 14ರಿಂದ 15 ಗಣಿಗಳ ಪುನರಾರಂಭಕ್ಕೆ ಅನುಮತಿ ಸಿಗಬಹುದು ಎಂದು `ಫಿಮಿ~ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಆರ್.ಕೆ. ಬನ್ಸಾಲ್ ಸುದ್ದಿಗಾರರಿಗೆ ತಿಳಿಸಿದರು.
ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಪ್ರತಿವರ್ಷ 4ರಿಂದ 5 ದಶಲಕ್ಷ ಟನ್ ಕಬ್ಬಿಣದ ಅದಿರು ಉತ್ಪಾದನೆ ಸಾಧ್ಯವಾಗಲಿದೆ.
ಗಣಿಗಾರಿಕೆ ಆರಂಭವಾದಲ್ಲಿ ಈಗಾಗಲೇ ಕಚ್ಚಾ ಮಾಲಿನ ಕೊರತೆಯಿಂದ ನರಳುತ್ತಿರುವ ಸ್ಥಳೀಯ ಉಕ್ಕು ಉತ್ಪಾದನಾ ಘಟಕಗಳಿಗೆ ಸಾಕಷ್ಟು ನೆರವಾಗಲಿದೆ ಎಂದು ಬನ್ಸಾಲ್ ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೆ ತಮ್ಮ ಸಂಸ್ಥೆ 26 ಗಣಿ ಉದ್ಯಮಗಳ ಪುನರ್ವಸತಿ ಯೋಜನೆಯನ್ನು ಐಸಿಎಫ್ಆರ್ಇಗೆ ಸಲ್ಲಿಸಿದ್ದು ಈ ಪೈಕಿ 9ರಿಂದ 10 ಉದ್ಯಮಗಳ ಪುನರಾರಂಭಕ್ಕೆ ಅಂತಿಮ ಅನುಮತಿ ಕೋರಿದ ಪ್ರಸ್ತಾವನೆಯನ್ನು ಅದು ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ)ಗೆ ಸಲ್ಲಿಸಿದೆ ಎಂದೂ ವಿವರಿಸಿದರು.