ನವದೆಹಲಿ: ಕುಮಾರಸ್ವಾಮಿ ಅರಣ್ಯ ವಲಯದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವಂತೆ ಕೋರಿ ಕಂಪೆನಿಗಳು ಸಲ್ಲಿಸಿರುವ ಅರ್ಜಿಗಳನ್ನು ನಾಲ್ಕು ತಿಂಗಳೊಳಗೆ ಪರಿಗಣಿಸುವಂತೆ ಕರ್ನಾಟಕ ಸರ್ಕಾರಕ್ಕೆ 2010ರಂದು ನೀಡಿದ್ದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಮತ್ತು ಇತರರು ಸಲ್ಲಿಸಿದ ಅರ್ಜಿಯ ಮೇಲಿನ ತೀರ್ಪನ್ನು ಸುಪ್ರೀಂಕೋರ್ಟ್ ಮಂಗಳವಾರ ಕಾಯ್ದಿರಿಸಿತು.
ನ್ಯಾಯಾಲಯದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಲು ಸುಪ್ರೀಂಕೋರ್ಟ್ ಅವಕಾಶ ನೀಡಿರಲಿಲ್ಲ ಎಂಬ ಅಟಾರ್ನಿ ಜನರಲ್ ಜಿ. ಇ. ವಹನ್ವತಿ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಪಿ. ಸದಾಶಿವಂ ಮತ್ತು ಎಚ್. ಎಲ್. ದತ್ತು ಅವರನ್ನೊಳಗೊಂಡ ಪೀಠ ವಿಚಾರಣೆಯನ್ನು ಪೂರ್ತಿಗೊಳಿಸಿತು. ಕೇಂದ್ರವನ್ನು ಹೊರತುಪಡಿಸಿ ಕರ್ನಾಟಕ ಸರ್ಕಾರ, ಜೆಎಸ್ಡಬ್ಲ್ಯೂ ಸ್ಟೀಲ್, ಕಲ್ಯಾಣಿ ಸ್ಟೀಲ್ ಮಿಲ್ಸ್ ಕೂಡ ತೀರ್ಪನ್ನು ಪರಿಶೀಲಿಸುವಂತೆ ಅರ್ಜಿ ಸಲ್ಲಿಸಿತ್ತು.ಪರಿಶೀಲನಾ ಅರ್ಜಿಯ ಬಹಿರಂಗ ವಿಚಾರಣೆ ನಡೆಸಲು ಪೀಠ ಮೇ ತಿಂಗಳಲ್ಲಿ ನಿರ್ಧರಿಸಿತ್ತು.